ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಜಿಲ್ಲೆಗೆ 18.86 ಕೋಟಿ ರೂ.ಬಿಡುಗಡೆ
ಉಡುಪಿ, ಡಿ.11: ಕಳೆದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಠಿ, ಪ್ರವಾಹದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾದ ಅಪಾರ ಪ್ರಮಾಣದ ಮಾನವ ಜೀವಹಾನಿ, ಜಾನುವಾರ ಹಾನಿ, ಮನೆ ಹಾನಿ, ಬೆಳೆ ಹಾನಿ ಹಾಗೂ ಮೂಲಸೌಕರ್ಯಗಳ ಹಾನಿಗಳಿಗೆ ಪರಿಹಾರವಾಗಿ ಕೇಂದ್ರ ಸರಕಾರದ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿಯಂತೆ 423 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿ ಆದೇಶಿಸಿದೆ.
ಇದರಂತೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದ ಅಪಾರ ಹಾನಿಗೆ 1 8.86 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇವು ಗಳಲ್ಲಿ 1.66 ಕೋಟಿ ರೂ.ವನ್ನು ಲೋಕೋಪಯೋಗಿ ಇಲಾಖೆ, ರಾಜ್ಯ ಹೆದ್ದಾರಿ ಹಾಗೂ ಎಂಡಿಆರ್ಗೆ, 8.71ಕೋಟಿ ರೂ.ಗಳನ್ನು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ದುರಸ್ಥಿಗೆ, 5.91 ಕೋಟಿ ರೂ. ಗಳನ್ನು ಇಂಧನ ಇಲಾಖೆ, ಮೆಸ್ಕಾಂಗೆ ವಿದ್ಯುತ್ ಪರಿಕರಗಳಿಗೆ, 1.53 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆ, ಪ್ರಾಥಮಿಕ ಶಾಲೆಗಳಿಗೆ, 1.01 ಕೋಟಿ ರೂ.ಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಗಳ ದುರಸ್ತಿಗೆ, 1.79ಲಕ್ಷ ರೂ.ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಂಚಿಕೆ ಮಾಡಲಾಗಿದೆ.
ರಾಜ್ಯಕ್ಕೆ 24,941 ಕೋಟಿ ರೂ.ಹಾನಿಯ ಅಂದಾಜು: ಮೂರು ತಿಂಗಳಲ್ಲಿ ಕಾಣಿಸಿಕೊಂಡ ಅತಿವೃಷ್ಟಿ ಹಾಗೂ ಪ್ರವಾಹದಿಂದ ರಾಜ್ಯಕ್ಕೆ ಒಟ್ಟಾರೆ 2491.73 ಕೋಟಿ ರೂ.ಅಂದಾಜು ಹಾನಿಯಾಗಿದ್ದು, ಕೇಂದ್ರ ಸರಕಾರದ ಎಸ್ಡಿಆಫ್ಎಫ್-ಎನ್ಡಿಆರ್ಎಫ್ ಮಾರ್ಗಸೂಚಿಯಂತೆ 2384.89 ಕೋಟಿ ರೂ.ಗಳ ಆರ್ಥಿಕ ನೆರವನ್ನು ಕೋರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಪ್ರವಾಹದಿಂದ 37806ಕಿ.ಮೀ. ರಸ್ತೆ, 4084 ಸೇತುವೆಗಳು, 1371 ನೀರಾವರಿ ಯೋಜನೆಗಳು, 650 ಕೆರೆಗಳು, 7606 ಸರಕಾರಿ ಕಟ್ಟಡಗಳು, 747 ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, 15,881 ವಿದ್ಯುತ್ ಕಂಬಗಳು, 3987ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾಗೂ 3878 ಟ್ರಾನ್ಸ್ಫಾರ್ಮರ್ಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯ ಗಳಿಗೆ ಹಾನಿಯಾಗಿರುವುದಾಗಿ ಮನವಿಯಲ್ಲಿ ವಿವರಿಸಲಾಗಿತ್ತು.
ಇದರಂತೆ ಕೇಂದ್ರ ಸರಕಾರ, ಎಸ್ಡಿಆರ್ಎಫ್,ಎನ್ಡಿಆರ್ಎಫ್ ಮಾರ್ಗ ಸೂಚಿಯಂತೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 423 ಕೋಟಿ ರೂ.ಗಳ ಅನುದಾನವನ್ನು ಬಾಧಿತ 22 ಜಿಲ್ಲೆಗಳಿಗೆ ಮಂಜೂರು ಮಾಡಿ ಆದೇಶಿಸಿದೆ. ಈ ಅನುದಾನವನ್ನು ರಾಜ್ಯ ಸರಕಾರ ಜಿಲ್ಲಾವಾರು ಅಗತ್ಯ ಮೂಲ ಸೌಕರ್ಯ ಗಳ ತುರ್ತು ದುರಸ್ಥಿಗಾಗಿ ಇಲಾಖಾವಾರು ಹಂಚಿಕೆ ಮಾಡಿ ಆಯಾ ಜಿಲ್ಲಾಧಿಕಾರಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿದೆ.
ಈ ಪ್ರಕಾರ ಉಡುಪಿ ಜಿಲ್ಲೆಗೆ ಒಟ್ಟು 18.86 ಕೋಟಿ ರೂ., ದಕ್ಷಿಣ ಕನ್ನಡಕ್ಕೆ 18.31 ಕೋಟಿ ರೂ., ಶಿವಮೊಗ್ಗ ಜಿಲ್ಲೆಗೆ 15.32 ಕೋಟಿ ರೂ., ಚಿಕ್ಕಮಗಳೂರು ಜಿಲ್ಲೆಗೆ 37.81ಕೋಟಿರೂ., ಉತ್ತರ ಕನ್ನಡ ಜಿಲ್ಲೆಗೆ 21.76 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.
ಬಿಡುಗಡೆ ಮಾಡಲಾದ ಅನುದಾನದಿಂದ 2020ರ ಆಗಸ್ಟ್ನಿಂದ ಅಕ್ಟೋಬರ್ ತಿಂಗಳವರೆಗೆ ಪ್ರವಾಹದಿಂದ ಹಾನಿಯಾದ ರಸ್ತೆಗಳ ದುರಸ್ಥಿ, ವಿದ್ಯುತ್ ಪರಿಕರ ದುರಸ್ಥಿ ಹಾಗೂ ಸರಕಾರಿ ಕಟ್ಟಡಗಳ ದುರಸ್ಥಿ ಕಾಮಗಾರಿಗಳಿಗೆ ಪ್ರಥಮ ಆದ್ಯತೆ ನೀಡು ವಂತೆ ರಾಜ್ಯ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ.