ರಾಜ್ಯದಲ್ಲಿ ಗೋಹತ್ಯೆ ನಿಷೇಧ: ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಖಂಡನೆ
ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯು ವಿಧಾನಸಭೆಯಲ್ಲಿ ಏಕಾಏಕಿ ಅಂಗೀಕಾರ ಪಡೆಯುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಜನರನ್ನು ಗೋರಕ್ಷಣೆಯ ಹೆಸರಿನಲ್ಲಿ ಭಾವನಾತ್ಮಕವಾಗಿ ಕೆರಳಿಸಲು ಮುಂದಾಗಿದೆ. ಇದು ಗೋರಕ್ಷಣೆಯ ಹೆಸರಿನಲ್ಲಿ ಗೋಸಂತತಿಯನ್ನು ವಿನಾಶ ಮಾಡುವಂತಹ ಕಾಯ್ದೆಯಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ಚರ್ಚೆಯಾಗದೆ ತರಾತುರಿಯಲ್ಲಿ ಈ ಕಾಯ್ದೆಯನ್ನು ಮಂಡಿಸಿರುವುದು ಖಂಡನೀಯ ಎಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಅಭಿಪ್ರಾಯಿಸಿದೆ.
ಪ್ರಸ್ತುತ ಕಾಯ್ದೆಯಲ್ಲಿ ಗೋಹತ್ಯೆಯನ್ನು ತಡೆಯುವವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದೆಂಬ ಪ್ರಸ್ತಾಪವು ಮುಂದೆ ದುಷ್ಕರ್ಮಿಗಳು ಅದನ್ನೇ ಅಸ್ತ್ರವನ್ನಾಗಿಸಿ, ದುರುಪಯೋಗಕ್ಕೊಳಪಡಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಈ ಕಾಯ್ದೆಯಿಂದಾಗಿ ರಾಜ್ಯದ ರೈತಾಪಿ ವರ್ಗವು ಬೀದಿ ಪಾಲಾಗುತ್ತಾರೆ. ವಿಶೇಷವಾಗಿ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳುತ್ತದೆ. ಇದು ಕೇವಲ ಜನರಲ್ಲಿ ಭೀತಿ ಹುಟ್ಟಿಸುವ ಕಾಯ್ದೆಯಾಗಿದೆ. ಆದ್ದರಿಂದ ಈ ಅನಾಗರಿಕ, ಅಸಂವಿಧಾನಿಕ ಹಾಗೂ ಅಮಾನುಷ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಆಗ್ರಹಿಸುತ್ತದೆಯೆಂದು ಜಿಲ್ಲಾ ಅಧ್ಯಕ್ಷರಾದ ಅಮೀರ್ ತಂಙಳ್ ಕಿನ್ಶ ಹಾಗೂ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.