ರಸ್ತೆ ಅಪಘಾತ: ಆರೆಸ್ಸೆಸ್ ಮುಖಂಡ ವೆಂಕಟರಮಣ ಹೊಳ್ಳ ಮೃತ್ಯು
ಬಂಟ್ವಾಳ, ಡಿ.15: ಪುತ್ತೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರೆಸ್ಸೆಸ್ ಹಿರಿಯ ಮುಖಂಡರೊಬ್ಬರು ಮೃತಪಟ್ಟಿದ್ದಾರೆ.
ಬಿ.ಸಿ.ರೋಡಿನ ಅಗ್ರಬೈಲ್ ನಿವಾಸಿ, ಆರೆಸ್ಸೆಸ್ ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖರೂ ಆಗಿದ್ದ ವೆಂಕಟರಮಣ ಹೊಳ್ಳ (60) ಮೃತಪಟ್ಟವರು.
ಸೋಮವಾರ ಆರೆಸ್ಸೆಸ್ ಬೈಠಕ್ ಮುಗಿಸಿ ಪುತ್ತೂರು ಪೊಲೀಸ್ ವಸತಿ ನಿಲಯಗಳ ಬಳಿಯ ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿದ್ದು, ಇಂದು ನಸುಕಿನ ಜಾವ 5 ಗಂಟೆಯ ಸುಮಾರಿಗೆ ಬೈಕ್ ನಲ್ಲಿ ಬಿ.ಸಿ.ರೋಡಿನ ಅಗ್ರಬೈಲ್ ನಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಪೋಳ್ಯದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ಅವರು ಸಂಚರಿಸುತ್ತಿದ್ದ ಬೈಕ್ ಪತ್ತೆಯಾಗಿದೆ. ವೆಂಕಟ್ರಮಣ ಹೊಳ್ಳ ಚಲಾಯಿಸುತ್ತಿದ್ದ ಬೈಕ್ ಗೆ ಬೇರೆ ಯಾವುದೋ ವಾಹನ ಢಿಕ್ಕಿಯಾಗಿ ಪರಾರಿಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ
ಆರೆಸ್ಸೆಸ್ ಕಾರ್ಯಕರ್ತರಾಗಿ ಬಾಲ್ಯದಿಂದಲೇ ಗುರುತಿಸಿಕೊಂಡಿದ್ದ ಅವರು ಸಂಘಟನೆಯ ರಾಷ್ಟ್ರೀಯ ನಾಯಕರ ಗಮನವನ್ನೂ ಸೆಳೆದವರು. ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೂ ವೆಂಕಟರಮಣ ಹೊಳ್ಳರು ಗುರು, ಮಾರ್ಗದರ್ಶಕರಾಗಿದ್ದರು. ಅವರ ಮನೆಯಲ್ಲಿಯೇ ಸಂಘದ ಶಿಕ್ಷಣವನ್ನು ನಳಿನ್ ಪಡೆದಿದ್ದರು.
ಇತ್ತೀಚೆಗೆ ಗ್ರಾಮ ವಿಕಾಸ ಸಮಿತಿಯ ಮಂಗಳೂರು ವಿಭಾಗ ಸಂಚಾಲಕರಾಗಿ ಬಿ.ಸಿ.ರೋಡ್, ಸುಳ್ಯ, ಪುತ್ತೂರು ಸಹಿತ ಹಲವೆಡೆ ಯುವಕರಿಗೆ ಆತ್ಮನಿರ್ಭರರಾಗುವ ಉದ್ಯೋಗ ತರಬೇತಿ ಆಯೋಜಿಸುವ ಮೂಲಕ ವೆಂಕಟರಮಣ ಹೊಳ್ಳ ಗಮನ ಸೆಳೆದಿದ್ದರು.