ವಿಎಚ್ಪಿಯಿಂದ ದುರುದ್ದೇಶಪೂರ್ವಕ ಉಚ್ಛಾಟನೆ: ಸಂತೋಷ್ ಬೈರಂಪಳ್ಳಿ
ಉಡುಪಿ, ಡಿ.15: ಸಂಘಟನೆಯನ್ನು ಒಡೆಯುವ ಉದ್ದೇಶ ಹಾಗೂ ಬೈರಂಪಳ್ಳಿ ಗ್ರಾಪಂ ವ್ಯಾಪ್ತಿಯ ಭ್ರಷ್ಟಾಚಾರ ಬಯಲಾಗುವ ಭಯದಿಂದ ಭೈರಂಪಳ್ಳಿಯ ಕೆಲವು ನಾಯಕರು ಸೇರಿ ಜಿಲ್ಲಾ ಧುರೀಣರನ್ನು ಬಳಸಿಕೊಂಡು ಜಿಲ್ಲಾ ವಿಎಚ್ಪಿ ಉಪಾಧ್ಯಕ್ಷ ಸ್ಥಾನದಿಂದ ನನ್ನನ್ನು ವಜಾ ಮಾಡಿಸಿದ್ದಾರೆ ಎಂದು ವಿಎಚ್ಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೈರಂಪಳ್ಳಿ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಎಚ್ಪಿ ಉಪಾಧ್ಯಕ್ಷನಾಗಿದ್ದ ಸಮಯದಲ್ಲಿ ನಾನು ಸಂಘಟನೆಗೆ ಹೆಚ್ಚಿನ ಗಮನ ಕೊಟ್ಟಿದ್ದು, ಬೈರಂಪಳ್ಳಿ, ಶೀರೂರು, ಬೆಳ್ಳರಪಾಡಿ ಗ್ರಾಮಗಳಲ್ಲಿ 6 ವಿಎಚ್ಪಿ ಘಟಕಗಳನ್ನು ಪ್ರಾರಂಭಿಸಿದ್ದೇನೆ. ಆದರೆ ಇದನ್ನು ಸಹಿಸದ ಕೆಲವರು ನನ್ನನ್ನು ವಿಎಚ್ಪಿ ಜವಾಬ್ದಾರಿಯಿಂದ ಮುಕ್ತಗೊಳಿಸಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ ಎಂದರು.
ಗ್ರಾಪಂ ಚುನಾವಣೆ ವ್ಯಕ್ತಿ ಆಧಾರಿತ ಚುನಾವಣೆ. ಇಲ್ಲಿ ಯಾವುದೇ ಪಕ್ಷಗಳು ಗಣನೆಗೆ ಬರುವುದಿಲ್ಲ. ಆದರೂ ವಿಎಚ್ಪಿ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಚುನಾವಣಾ ಹೇಳಿಕೆ ನೀಡಿದ್ದಕ್ಕೆ ವಿಎಚ್ಪಿ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದಾರೆ. ಇದೀಗ ಬೈರಂಪಳ್ಳಿ ಗ್ರಾಪಂನ್ನು ಭ್ರಷ್ಟಾಚಾರ ಮುಕ್ತ ಗೊಳಿಸುವ ಮತ್ತು ಸರ್ವತೋಮಖ ಅಭಿವೃದ್ಧಿಗಾಗಿ ನಾನು ಹಾಗೂ 13 ಯುವ ಅಭ್ಯರ್ಥಿಗಳ ತಂಡಕಟ್ಟಿಕೊಂಡು ಪಕ್ಷರಹಿತವಾಗಿ ಸ್ಪರ್ಧಿಸುತ್ತಿದ್ದೇವೆ ಎಂದರು.
ತಂಡದ ಸದಸ್ಯರಾದ ಸುಕೇಶ್ ಪೂಜಾರಿ, ಶಿಲ್ಪಾ, ರತ್ನಾವತಿ, ಪವಿತ್ರಾ, ಪ್ರಶಾಂತ್ ಹೆಗ್ಡೆ ಉಪಸ್ಥಿತರಿದ್ದರು.