ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ: ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ ಗೊತ್ತಾ?
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್
ಮಂಗಳೂರು, ಡಿ.19: ಉಜಿರೆಯ ಉದ್ಯಮಿ ಎ.ಜೆ. ಬಿಜೋಯ್ ಅವರ 8 ವರ್ಷದ ಪುತ್ರ ಅನುಭವ್ ಪ್ರಕರಣ ಸುಖಾಂತ್ಯಗೊಂಡಿದ್ದು, ಬಾಲಕನನ್ನು ಕೋಲಾರದಲ್ಲಿ ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಸೂತ್ರಧಾರಿಗಳ ಸುಳಿವು ಲಭ್ಯವಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ. 17ರಂದು ಸಂಜೆ 6 ಗಂಟೆಯಿಂದ 6.35ರ ಅವಧಿಯ ನಡುವೆ ಉಜಿರೆಯ ರಥಬೀದಿ ಅಶ್ವತಕಟ್ಟೆಯ ಬಳಿಯಿಂದ ಬಾಲಕ ಅನುಭವ್ನನ್ನು ಅಪಹರಿಸಲಾಗಿದ್ದು, ಇಂದು ಬೆಳಗ್ಗಿನ ಜಾವ ಅಪಹರಣಗೊಂಡಿದ್ದ ಬಾಲಕನೊಂದಿಗೆ ಆರು ಮಂದಿ ಆರೋಪಿಗಳನ್ನು ಕೋಲಾರದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಬಂಧಿತರಾದ ಮಂಡ್ಯದ ರಂಜಿತ್ (22), ಹನುಮಂತು (21), ಮೈಸೂರಿನ ಗಂಗಾಧರ (25), ಬೆಂಗಳೂರಿನ ಕಮಲ್ (22) ಅಪಹರಣಗೊಳಿಸಿದ ಆರೋಪಿಗಳಾಗಿದ್ದು, ಕೋಲಾರದ ಮಂಜುನಾಥ್ (24) ಹಾಗೂ ಮಹೇಶ್ (26) ಅಪಹರಣಕಾರರಿಗೆ ಆಶ್ರಯ ನೀಡಿವರಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಪ್ರಕರಣ ಬೇಧಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಹಾಸನ, ಬೆಂಗಳೂರು, ಮೂಡಿಗೆರೆ ಹಾಗೂ ಮಧುಗಿರಿ ಕಡೆಗಳಿಗೆ ಆರೋಪಿಗಳ ಪತ್ತೆಗೆ ಕಳುಹಿಸಲಾಗಿತ್ತು. ಸ್ಥಳೀಯವಾಗಿ ದೊರೆತ ಮಾಹಿತಿಯ ಆಧಾರದಲ್ಲಿ ಹಾಗೂ ಮಧುಗಿರಿಯಲ್ಲಿ ದೊರೆತ ಮಾಹಿತಿಯಂತೆ ಮಂಡ್ಯ ಹಾಗೂ ಬೆಂಗಳೂರು ಕಡೆಗಳ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿ ಅಂತಿಮವಾಗಿ ಡಿ. 18ರಂದು ರಾತ್ರಿ ವೇಳೆಗೆ ಆರೋಪಿಗಳು ಕೋಲಾರದಲ್ಲಿರುವ ಬಗ್ಗೆ ಖಚಿತಪಡಿಸಲಾಯಿತು. ಸ್ಥಳೀಯ ಕೋಲಾರ ಪೊಲೀಸರ ಸಹಾಯ ಪಡೆದು ಬೆಗ್ಗೆ 6 ಮಂದಿ ಆರೋಪಿಗಳನ್ನು ಬಂಧಿಸಿ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಆರೋಪಿಗಳನ್ನು ಕೋಲಾರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅವರು ಹೇಳಿದರು.
ಪ್ರಕರಣದ ತನಿಖೆಯ ಪ್ರಾಥಮಿಕ ಹಂತದಲ್ಲಿ ಬಾಲಕನ ಅಪಹರಣವಾದ ಬಳಿಕ ಬೇರೊಂದು ರಾಜ್ಯದ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿ 100 ಬಿಟ್ಕಾಯಿನ್ (17 ಕೋಟಿ ರೂ. ಮೌಲ್ಯ) ಬೇಡಿಕೆ ಇರಿಸಲಾಗಿತ್ತು. ಬಳಿಕ ವಾಟ್ಸಾಪ್ ಮೆಸೆಜ್ ಮೂಲಕ ಬಿಟ್ ಕಾಯಿನ್ಗಾಗಿ ಸಂದೇಶ ಕಳುಹಿಸಲಾಗಿದೆ.
ಬಾಲಕನ ತಂದೆ ಹಿಂದೆ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದ ಮಾಹಿತಿ ಇದ್ದ ಹಿನ್ನೆಲೆಯಲ್ಲಿಯೇ ಬಿಟ್ ಕಾಯಿನ್ ಬೇಡಿಕೆ ಇಡಲಾಗಿತ್ತು. ಬಾಲಕನ ತಂದೆ ಮೂರು ವರ್ಷಗಳ ಹಿಂದೆ ತಾನು ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದು, ಈಗ ತನ್ನಲ್ಲಿ ಇಲ್ಲವೆಂದು ಬೆದರಿಕೆ ಕರೆ, ಸಂದೇಶ ಕಳುಹಿಸಿದವರಿಗೆ ತಿಳಿಸಿದರೂ, ನಿನ್ನಲ್ಲಿ ಇರುವುದು ಗೊತ್ತಿದೆ ಎಂದು ಹೇಳಿರುವುದು ಅಪಹರಣ ಮಾಡಿರುವವರು ಮನೆಯವರಿಗೆ ಪರಿಚಯಸ್ಥರೇ ಎಂಬ ಗುಮಾನಿ ನೆಲೆಯಲ್ಲಿ ತನಿಖೆ ನಡೆಸಲಾಯಿತು. ಜತೆಗೆ ಸಿಸಿ ಕ್ಯಾಮರಾ, ದೂರವಾಣಿ ಕರೆಗಳ ಆಧಾರದಲ್ಲಿ ಸದ್ಯ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಗೆ ಅಪಹರಣ ಮಾಡಲು ಡೀಲ್ ಕುದುರಿಸಿದ್ದವರ ಸುಳಿವು ದೊರಕಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಲಕ್ಷ್ಮೀ ಪ್ರಸಾದ್ ತಿಳಿಸಿದರು.
ಸೂತ್ರಧಾರರಿಂದ ಅಪಹರಣಕ್ಕಾಗಿಯೇ 7 ಲಕ್ಷ ರೂ. ಡೀಲ್!
ಬಾಲಕನ ತಂದೆಯ ಪರಿಚಯಸ್ಥರೇ ಈ ಅಪಹರಣ ಕೃತ್ಯದ ಸೂತ್ರಧಾರರಾಗಿದ್ದು, (ಸೂತ್ರಧಾರ ಒಬ್ಬರಿಂದ ಮೂರು ವ್ಯಕ್ತಿಗಳಿರಬಹುದು) ಬಂಧಿತರಾದ ರಂಜಿತ್, ಹನುಮಂತು, ಗಂಗಾಧರ ಹಾಗೂ ಕಮಲ್ ಜತೆ 7 ಲಕ್ಷ ರೂ.ಗಳಿಗೆ ಅಪಹರಣ ಕೃತ್ಯವನ್ನು ಡೀಲ್ ಮಾಡಿಕೊಂಡಿದ್ದಾರೆ. ಈ ನಾಲ್ಕು ಮಂದಿಯೂ ನೆಟ್ವರ್ಕ್ ವ್ಯವಹಾರ ನಡೆಸುತ್ತಿದ್ದವರು.
ಬಾಲಕನ ಮನೆಯವರಿಂದ 100 ಬಿಟ್ ಕಾಯಿನ್ (17 ಕೋಟಿ ರೂ.)ಗಳ ಬೇಡಿಕೆ ಇರಿಸಿದ್ದ ಪ್ರಮುಖ ಸೂತ್ರಧಾರ ಬಾಲಕನನ್ನು ಅಪಹರಿಸಿದ ಈ ನಾಲ್ವರಿಗೆ ಒಂದು ದಿನದೊಳಗೆ ಡೀಲ್ ಮೊತ್ತ (7 ಲಕ್ಷ ರೂ.)ವನ್ನು ನೀಡುವ ಭರವಸೆಯನ್ನೂ ನೀಡಿದ್ದರು. ಹಾಗಾಗಿ ಅಪಹರಣಕಾರರು ಹಾಗೂ ಬಾಲಕನ ಮನೆಯವರ ನಡುವೆ ಯಾವುದೇ ವ್ಯವಹಾರ, ಮಾತುಕತೆ ನಡೆದಿಲ್ಲ. ಆದರೆ ಸೂತ್ರಧಾರ ತಿಳಿಸಿರುವಂತೆ ಒಂದು ದಿನದಲ್ಲಿ ಡೀಲ್ ಮೊತ್ತ ಸಿಗದ ಕಾರಣ ಬಾಲಕನನ್ನು ಅಪಹರಿಸಿದ ಆರೋಪಿಗಳು ಮುಂದೆ ಏನು ಮಾಡಬೇಕೆಂದು ತೋಚದೆ, ಮಂಡ್ಯದಿಂದ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಬಂಧಿತ ಆರೋಪಿ ಕಮಲ್ ಮನೆಯಲ್ಲಿ ಸುಮಾರು 20 ನಿಮಿಷಗಳ ಕಾಲವಿದ್ದು, ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಅಲ್ಲಿಂದ ಕೋಲಾರಕ್ಕೆ ತೆರಳಿ ಅಲ್ಲಿ ಆರೋಪಿ ಮಂಜುನಾಥ್ರವರ ಪರಿಚಯಸ್ಥರಾದ ಇನ್ನೋರ್ವ ಬಂಧಿತ ಆರೋಪಿ ಮಹೇಶ್ ಎಂಬವರ ಮನೆಯಲ್ಲಿ ಬಾಲಕನನ್ನು ಇರಿಸಿದ್ದರು. ಮಗುವಿನ ಜತೆ ಅಪಹರಣಕಾರರು ಚೆನ್ನಾಗಿ ವರ್ತಿಸಿದ್ದು, ಯಾವುದೇ ರೀತಿಯಲ್ಲಿ ಹಾನಿಯುಂಟುಮಾಡಿಲ್ಲ. ಸದ್ಯದ ಪ್ರಕಾರ ಇನ್ನೂ ಒಂದರಿಂದ ಮೂರು ಮಂದಿ ಆರೋಪಿಗಳಿರುವ ಸಾಧ್ಯತೆ ಇದ್ದು, ತನಿಖೆ ನಡೆಯುತ್ತಿದೆ. ಕೇವಲ ಹಣಕ್ಕಾಗಿಯೇ ಈ ಕೃತ್ಯ ನಡೆದಿದೆಯೇ ಅಥವಾ ಇನ್ಯಾವುದಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಸೂತ್ರಧಾರ ಆರೋಪಿಗಳ ಬಂಧನವಾದ ಬಳಿಕ ತಿಳಿಯಬೇಕಿದೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದರು.