ಮಕ್ಕಳಿಗೆ ಶಿಕ್ಷಕರೇ ನಿಜವಾದ ರೋಲ್ ಮಾಡೆಲ್: ಉಡುಪಿ ಡಿಸಿ ಜಗದೀಶ್
ಡಾ.ವಿರೂಪಾಕ್ಷ ದೇವರಮನೆಯ ‘ಥ್ಯಾಂಕ್ಯೂ ಟೀಚರ್’ ಕೃತಿ ಬಿಡುಗಡೆ
ಉಡುಪಿ, ಡಿ.19: ಶಿಕ್ಷಕರು ಹಕ್ಕುಗಳನ್ನು ಕೇಳುವ ಜೊತೆಗೆ ತಮ್ಮ ಕರ್ತವ್ಯ ಗಳನ್ನು ಕೂಡ ಸರಿಯಾಗಿ ನಿಬಾಯಿಸಬೇಕು. ಆ ಮೂಲಕ ಅತ್ಯಂತ ಶ್ರೇಷ್ಠ ಶಿಕ್ಷಕರಾಗಲು ಪ್ರಯತ್ನಿಸಬೇಕು. ಮಕ್ಕಳಿಗೆ ಶಿಕ್ಷಕರು ಮಾತ್ರ ರೋಲ್ ಮಾಡೆಲ್ ಗಳಾಗಿರುತ್ತಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಸಾವಣ್ಣ ಪ್ರಕಾಶನ ಅರ್ಪಿಸುವ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಅವರ ‘ಥ್ಯಾಂಕ್ಯೂ ಟೀಚರ್’ ಕೃತಿಯನ್ನು ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ರೋಲ್ ಮಾಡೆಲ್ಗಳಾಗಲು ಶಿಕ್ಷಕರ ನಡೆ, ನುಡಿ, ವರ್ತನೆ, ಜ್ಞಾನ ಅತ್ಯಂತ ಮುಖ್ಯವಾಗಿರುತ್ತದೆ. ಅಸಾಮಾನ್ಯರಾಗಿ ಹುಟ್ಟುವ ನಾವು ಸಾಮಾನ್ಯ ಜೀವಿಯಾಗಿ ಸಾಯುತ್ತೇವೆ. ನಮ್ಮಲ್ಲಿರುವ ಪ್ರತಿಭೆ, ಶಕ್ತಿಯನ್ನು ನಾವೇ ಗುರುತಿಸುವಲ್ಲಿ ವಿಫಲರಾಗುತ್ತಿದ್ದೇವೆ. ಆದುದರಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರೇಷ್ಠ ಸಾಧಕಾಗಲು ಪ್ರಯತ್ನಿಸಬೇಕು ಎಂದರು.
ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಉಡುಪಿ ಡಯಟ್ ಹಿರಿಯ ಉಪನ್ಯಾಸಕ ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ವಿಶೇಷ ಉಪನ್ಯಾಸ ನೀಡಿದರು.
ಪ್ರಕಾಶಕ ಜಮೀಲ್ ಸಾವಣ್ಣ ಉಪಸ್ಥಿತರಿದ್ದರು. ಡಾ.ವಿರೂಪಾಕ್ಷ ದೇವರ ಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿದರು.