ಗೋಡೆಬರಹ ಪ್ರಕರಣ ಎನ್ಐಎಗೆ ವಹಿಸಿ: ವಿಎಚ್ಪಿ
ಮಂಗಳೂರು, ಡಿ.23: ಪ್ರಚೋದನಕಾರಿ ಗೋಡೆಬರಹ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ (ಎನ್ಐಎ) ವಹಿಸಬೇಕು ಎಂದು ಆಗ್ರಹಿಸಿ ಮತ್ತು ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊಲೆಯತ್ನ ಖಂಡಿಸಿ ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗದಿಂದ ಮಂಗಳೂರು ತಾಲೂಕು ಕಚೇರಿ ಮುಂಭಾಗ ವಿಹಿಂಪ ಮತ್ತು ಬಜರಂಗದಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್., ಮಂಗಳೂರಿನಲ್ಲಿ ಪ್ರಚೋದನಕಾರಿ ಗೋಡೆ ಬರಹದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಆರೋಪಿಗಳ ಬಳಿ ವಿದೇಶಿ ಮೂಲದ ವ್ಯಕ್ತಿಯ ಪ್ರಚೋದನಕಾರಿ ಭಾಷಣ ಮತ್ತು ಇತರ ಪುಸ್ತಕಗಳು ಸಿಕ್ಕಿರುವುದು ಆತಂಕಕಾರಿ. ಪ್ರಕರಣದಲ್ಲಿ ವ್ಯವಸ್ಥಿತ ಷಡ್ಯಂತ್ರವಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು.
ಹಿಂದೂ ಧರ್ಮ ಸಾವಿರಾರು ವರ್ಷಗಳಿಂದ ಅನ್ಯಮತೀಯರ ದಾಳಿಯನ್ನು ಎದುರಿಸಿ ನಿಂತಿದೆ. ಕರಾವಳಿ ತೀರ ಹಿಂದುತ್ವದ ಕಡಲು. ಇಲ್ಲಿ ಭಯೋತ್ಪಾದನೆಗೆ ವಿಹಿಂಪ, ಬಜರಂಗದಳ ಅವಕಾಶ ನೀಡುವುದಿಲ್ಲ. ಉಗ್ರಗಾಮಿ ಚಟುವಟಿಕೆ ನಡೆಸುವವರ ಕೈ, ತಲೆ ಉಳಿಯುವುದಿಲ್ಲ. ತಮ್ಮ ಮೇಲೆ ದಾಳಿ ನಡೆದರೆ ಪೊಲೀಸರು ಬಂದೂಕು ಬಳಕೆ ಮಾಡಬೇಕು. ಕರಾವಳಿಯಲ್ಲಿ ಭಯೋತ್ಪಾದನಾ ಚಟುವಟಿಕೆ ನಿಗ್ರಹಕ್ಕೆ ಎನ್ಐಎ ಕಚೇರಿಯನ್ನು ಮಂಗಳೂರಿನಲ್ಲಿ ತೆರೆಯಬೇಕು ಎಂದರು.
ವಿಹಿಂಪ ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗೌಡ ಮಾತನಾಡಿ, ದೇಶದ ಎಲ್ಲೇ ಉಗ್ರಗಾಮಿ ಚಟುವಟಿಕೆ ನಡೆದರೂ ಕಾಸರಗೋಡು, ಮಂಗಳೂರು, ಮಣಿಪಾಲಕ್ಕೆ ನಂಟು ಇರುವುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗುತ್ತಿದೆ. ಹಿಂದುಗಳ ವಿರುದ್ಧ, ದೇಶದ ವಿರುದ್ಧ ಮಾತನಾಡುವ ಎಲ್ಲರೂ ಉಗ್ರರೇ ಆಗಿದ್ದಾರೆ. ಮಂಗಳೂರಿನ ಗೋಡೆ ಬರಹ ಪ್ರಕರಣದ ಮೂಲ ತಿಳಿಯಬೇಕಾದರೆ ಎನ್ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಉಪಾಧ್ಯಕ್ಷ ಮನೋಹರ ಸುವರ್ಣ, ಬಜರಂಗದಳದ ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಸುಕನ್ಯಾ ರಾವ್, ಆಶಾ ಜಗದೀಶ್, ಗುರುಪ್ರಸಾದ್ ಉಳ್ಳಾಲ ಪಾಲ್ಗೊಂಡಿದ್ದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ಸುರೇಖಾರಾಜ್ ಮನವಿ ಪತ್ರ ವಾಚಿಸಿದರು.