ಎರಡನೆ ಹಂತದ ಶಾಂತಿಯುತ ಚುನಾವಣೆ :ಉಡುಪಿ ಜಿಲ್ಲೆಯ 3 ತಾಲೂಕುಗಳಲ್ಲಿ ಶೇ.75.42 ಮತದಾನ
ಮತದಾನ ದಿನವೇ ಅಭ್ಯರ್ಥಿಗೆ ನಿಶ್ಚಿತಾರ್ಥ
ಉಡುಪಿ, ಡಿ. 27: ಕೊರೋನ ಭೀತಿಯ ಮಧ್ಯೆ ಜಿಲ್ಲೆಯ ಕುಂದಾಪುರ, ಕಾಪು, ಕಾರ್ಕಳ ತಾಲೂಕುಗಳ 86 ಗ್ರಾಪಂಗಳ ಒಟ್ಟು 1209 ಸ್ಥಾನ ಗಳಿಗೆ ಕೋವಿಡ್-19 ನಿಯಮ ಪಾಲನೆಯೊಂದಿಗೆ ಇಂದು ಶಾಂತಿಯುತ ಮತದಾನ ನಡೆದಿದೆ. ಎರಡನೆ ಹಂತದಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ.75.42 ಮತಾನ ವಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ 43 ಗ್ರಾಪಂಗಳ 200 ಕ್ಷೇತ್ರಗಳ 530 ಸ್ಥಾನಗಳಿಗೆ ಒಟ್ಟು 266 ಮತಗಟ್ಟೆಗಳಲ್ಲಿ 76.09, ಕಾಪು ತಾಲೂಕಿನ 16 ಗ್ರಾಪಂಗಳ 99 ಕ್ಷೇತ್ರಗಳ 280 ಸ್ಥಾನಗಳಿಗೆ ಒಟ್ಟು 140 ಮತಗಟ್ಟೆಗಳಲ್ಲಿ ಶೇ.73.08, ಕಾರ್ಕಳ ತಾಲೂಕಿನ 27 ಗ್ರಾಪಂಗಳ 145 ಕ್ಷೇತ್ರಗಳ 399 ಸ್ಥಾನಗಳಿಗೆ ಒಟ್ಟು 187 ಮತಗಟ್ಟೆಗಳಲ್ಲಿ ಶೇ.76.21 ಮತದಾನ ಆಗಿರುವುದು ಪ್ರಾಥಮಿಕ ವರದಿ ಯಿಂದ ತಿಳಿದುಬಂದಿದೆ.
ಬೈಂದೂರು ತಾಲೂಕಿನಲ್ಲಿದ್ದ ನಾಡಾ ಗ್ರಾಪಂಗೆ ಒಳಪಟ್ಟ ಸೇನಾಪುರ ಗ್ರಾಮ ವನ್ನು ಕುಂದಾಪುರ ತಾಲೂಕಿನ ಹೊಸಾಡು ಗ್ರಾಪಂಗೆ ಸೇರ್ಪಡೆ ಗೊಳಿಸಿ ರುವುದನ್ನು ವಿರೋಧಿಸಿ ಪ್ರಾದೇಶಿಕ ಆಯುಕ್ತ ಕಚೇರಿಗೆ ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಹೊಸಾಡು ಗ್ರಾಪಂಗೆ ಚುನಾವಣೆ ನಡೆಸದಂತೆ ಚುನಾ ವಣಾ ಆಯೋಗ ಘೋಷಿಸಿತ್ತು. ಆದುದರಿಂದ ಕುಂದಾಪುರ ತಾಲೂಕಿನ 44 ಗ್ರಾಪಂಗಳ ಪೈಕಿ 43 ಗ್ರಾಪಂಗಳಲ್ಲಿ ಮಾತ್ರ ಇಂದು ಮತದಾನ ನಡೆಯಿತು.
ಮತದಾನ ಆರಂಭಗೊಂಡ ಎರಡು ಗಂಟೆಗಳಲ್ಲಿ ಅಂದರೆ ಬೆಳಗ್ಗೆ 9ಗಂಟೆ ವರೆಗೆ ಮೂರು ತಾಲೂಕುಗಳಲ್ಲಿ ಒಟ್ಟು ಶೇ.12.8ರಷ್ಟು ಮತಗಳು ಚಲಾಯಿ ಸಲ್ಪಟ್ಟಿದ್ದವು. ಬಳಿಕ ಬೆಳಗ್ಗೆ 11ಗಂಟೆವರೆಗೆ ಶೇ.31.23, ಮಧ್ಯಾಹ್ನ ಒಂದು ಗಂಟೆವರೆಗೆ ಶೇ.50.3, ಮಧ್ಯಾಹ್ನ 3ಗಂಟೆಯವರೆಗೆ ಶೇ.61.7ರಷ್ಟು ಬಿರುಸಿನ ಮತದಾನ ನಡೆದಿತ್ತು.
ಮಾಧ್ಯಮದವರು ಭೇಟಿಯ ಸಂದರ್ಭ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಪಂ ವ್ಯಾಪ್ತಿಯ ಕಾಂತರಗೋಳಿ ಮತಗಟ್ಟೆಯಲ್ಲಿ ಒಂದು ಪಕ್ಷದ ಕಾರ್ಯ ಕರ್ತರು ಟೆಂಪೊ ಟ್ರಾವೆಲರ್ಸ್ನಲ್ಲಿ ಹತ್ತಾರು ಟ್ರಿಪ್ ಮೂಲಕ ಮತದಾರರನ್ನು ಮತಗಟ್ಟೆಗೆ ಕರೆ ತರುವ ದೃಶ್ಯ ಕಂಡುಬಂತು. ಕೆಲವು ಕಡೆ ಕಾರು ಹಾಗೂ ರಿಕ್ಷಾಗಳಲ್ಲಿಯೂ ಮತದಾರರನ್ನು ವುತಗಟ್ಟೆಗೆ ಕರೆತರಲಾಗುತ್ತಿತ್ತು.
ಮತದಾರರು ಮಾಸ್ಕ್ ಧರಿಸಿ ಮತಗಟ್ಟೆಗಳಿಗೆ ಬಂದರೂ ಸುರಕ್ಷಿತ ಅಂತರ ಕಾಪಾಡುವ ಬಗ್ಗೆ ಗಮನ ಹರಿಸದಿರುವುದು ಕಂಡುಬಂತು. ಮತಗಟ್ಟೆ ಸಮೀಪ ದಲ್ಲಿರುವ ಅಭ್ಯರ್ಥಿಗಳ ಬೂತ್ಗಳಲ್ಲಿ ಪಕ್ಷವೊಂದರ ಕಾರ್ಯಕರ್ತರು ಕೇಸರಿ ಶಾಲು ಧರಿಸಿರುವುದು ಕಾರ್ಕಳ ತಾಲೂಕಿನಾ ದ್ಯಂತ ಕಂಡಬಂದವು.
ಸೂಕ್ಷ್ಮ ಮತಗಟ್ಟೆಯಾಗಿರುವ ಕಾರ್ಕಳ ತಾಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಯ ಕೌಡೂರು ಕ್ಷೇತ್ರದ ಬೈಲೂರು ಮೈನ್ ಶಾಲೆಯಲ್ಲಿರುವ ಮತಗಟ್ಟೆಗೆ ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿಸಿ ಯಾವುದೇ ಅಹಿತಕರ ಘಟನೆ ಸಂಭವಿಸಿ ರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಕಾರ್ಕಳ ತಾಲೂಕಿನ ಬೈಲೂರು, ನಿಟ್ಟೆ ಮತ್ತು ಕಾಪು ತಾಲೂಕಿನ ಪಡುಬಿದ್ರೆ ಮತಗಟ್ಟೆಗಳಿಗೆ ಮತ್ತು ಎಸ್ಪಿ ವಿಷ್ಣುವರ್ಧನ್ ಕುಂದಾಪುರ ತಾಲೂಕಿನ ಕಂಡ್ಲೂರು, ಕಾರ್ಕಳ ತಾಲೂಕಿನ ಅಜೆಕಾರು, ಕಾಪು ತಾಲೂಕಿನ ಶಿರ್ವ, ಕಟಪಾಡಿ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಮ್ತು ಭದ್ರತೆಯನ್ನು ಪರಿಶೀಲಿಸಿದರು.
ಸಂಜೆ ಐದು ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತಗಟ್ಟೆ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಮತಪೆಟ್ಟಿಗೆಯನ್ನು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು, ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜು ಗಳಲ್ಲಿರುವ ಡಿಮಸ್ಟರಿಂಗ್ ಕೇಂದ್ರಗಳಲ್ಲಿ ಇರಿಸಿದರು. ಈ ಹಿನ್ನೆಲೆಯಲ್ಲಿ ಈ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಡಿ.30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ನಕ್ಸಲ್ ಬಾಧಿತ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ
ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕುಂದಾಪುರ ತಾಲೂಕಿನ 18 ಹಾಗೂ ಕಾರ್ಕಳ ತಾಲೂಕು ವ್ಯಾಪ್ತಿಯ 24 ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆದಿದೆ.
ಕಾರ್ಕಳ ತಾಲೂಕಿನ ನಕ್ಸಲ್ ಬಾಧಿತ ಪ್ರದೇಶವಾಗಿರುವ ಶಿರ್ಲಾಲು ಗ್ರಾಪಂ ವ್ಯಾಪ್ತಿಯ ಶಿರ್ಲಾಲು ಸೂಡಿ ಸರಕಾರಿ ಶಾಲೆಯಲ್ಲಿರುವ ಮೂರು ಮತಗಟ್ಟೆಗಳಲ್ಲಿ ಮಧ್ಯಾಹ್ನ 11.40ರ ವೇಳೆಗೆ ಶೇ.54ರಷ್ಟು ಮತದಾನವಾಗಿದ್ದರೆ, ಮಧ್ಯಾಹ್ನ 1.30ರ ಸುಮಾರಿಗೆ ಮಾಳ ಗ್ರಾಪಂ ವ್ಯಾಪ್ತಿಯ ಶ್ರೀಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಒಂದು ಮತಗಟ್ಟೆಯಲ್ಲಿ ಶೇ.34 ಹಾಗೂ ಇನ್ನೊಂದು ಮತಗಟ್ಟೆಯಲ್ಲಿ ಶೇ.54ರಷ್ಟು ಮತದಾನವಾಗಿತ್ತು.
ಶಿರ್ಲಾಲು ಸೂಡಿ ಮತಗಟ್ಟೆಯಲ್ಲಿ ಅಪಘಾತದಿಂದ ಗಾಯಾಳು ಆಗಿದ್ದ ಸುಧಾಕರ ಶೆಟ್ಟಿ ತಮ್ಮ ಮಕ್ಕಳ ಸಹಾಯದಿಂದ ಮತಗಟ್ಟೆ ತೆರಳಿ ಮತದಾನ ಮಾಡಿರುವುದು ಕಂಡುಬಂತು. ಅದೇ ರೀತಿ 70ವರ್ಷ ವಯಸ್ಸಿನ ನೇತ್ರಾವತಿ ಎಂಬವರು ನಡೆಯಲು ಸಾಧ್ಯವಾಗದೆ ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿದರು.
ನಕ್ಸಲ್ ಬಾಧಿತ ಪ್ರದೇಶದ ಪ್ರತಿ ಮತಗಟ್ಟೆಯನ್ನು ಅತೀ ಸೂಕ್ಷ್ಮ ಮತಗಟ್ಟೆ ಎಂಬುದಾಗಿ ಪರಿಗಣಿಸಲಾಗಿದ್ದು, ಇಲ್ಲಿ ಇಬ್ಬರು ಎಎಸ್ಸೈ, ಓರ್ವ ಆರ್ಮ್ಡ್ ಪೊಲೀಸ್ ಸಿಬ್ಬಂದಿ ಹಾಗೂ ಪ್ರತಿ ಮತಗಟ್ಟೆಗೆ ಓರ್ವ ಪೊಲೀಸ್ ಸಿಬ್ಬಂದಿ ಯನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.
ಕೇಸರಿ ಶಾಲಿಗೆ ನೋಡೆಲ್ ಅಧಿಕಾರಿ ಆಕ್ಷೇಪ
ಕಾರ್ಕಳ ತಾಲೂಕು ನೊಡೇಲ್ ಅಧಿಕಾರಿ ಅರುಣ್ ಪ್ರಭಾ, ಶಿರ್ಲಾಲು ಸೂಡಿ ಸರಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ಇಂದು ಬೆಳಗ್ಗೆ ಭೇಟಿ ನೀಡಿದ್ದು, ಈ ಸಂದರ್ಭ ಮತಗಟ್ಟೆ ಒಳಗೆ ಅಭ್ಯರ್ಥಿಯ ಏಜೆಂಟ್ ಒಬ್ಬರು ಕೇಸರಿ ಶಾಲು ಧರಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ.
ಮತಗಟ್ಟೆ ಪರಿಶೀಲನೆ ವೇಳೆ ಮತಗಟ್ಟೆಯೊಳಗೆ ಇರುವ ಏಜೆಂಟ್ ಕೇಸರಿ ಶಾಲನ್ನು ಧರಿಸಿಕೊಂಡಿರುವುದನ್ನು ನೋಡಿದ ನೋಡೆಲ್ ಅಧಿಕಾರಿ, ಶಾಲು ತೆಗೆಯುವಂತೆ ಸೂಚಿಸಿದರು. ಈ ವೇಳೆ ಏಜೆಂಟ್ ತಾನು ಹಾಕಿರುವ ಶಾಲಿನ ಬಗ್ಗೆ ಸಮರ್ಥಿಸಿಕೊಂಡರು. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆಯಿತ್ತೆನ್ನಲಾಗಿದೆ.
ಬಳಿಕ ಮತಗಟ್ಟೆ ಅಧಿಕಾರಿಗಳು ತಾಲೂಕಿನ ಎಂಸಿಸಿ ನೋಡೆಲ್ ಅಧಿಕಾರಿ ಯನ್ನು ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟನೆ ಪಡೆದುಕೊಂಡರು. ಈ ಬಗ್ಗೆ ಸರಕಾರದಿಂದ ಯಾವುದೇ ಸರಿಯಾದ ಮಾರ್ಗಸೂಚಿ ಇಲ್ಲದಿರುವುದರಿಂದ ಏಜೆಂಟ್ಗೆ ಕೇಸರಿ ಶಾಲು ಹಾಕಲು ಅನುವು ಮಾಡಿಕೊಡಲಾ ಯಿತು.
ಮತದಾನ ದಿನವೇ ಅಭ್ಯರ್ಥಿಗೆ ನಿಶ್ಚಿತಾರ್ಥ
ಕಾಪು ತಾಲೂಕಿನ ಬೆಳ್ಳೆ ಗ್ರಾಪಂನ ಒಂದನೇ ವಾರ್ಡ್ನ ಅನುಸೂಚಿತ ಜಾತಿಯ ಮೀಸಲು ಅಭ್ಯರ್ಥಿ ಅಮಿತಾ ಅವರ ವಿವಾಹ ನಿಶ್ಛಿತಾರ್ಥವು ಮತದಾನ ದಿನವಾದ ಇಂದೇ ನಡೆಯಿತು.
ಬೆಳಗ್ಗೆ ಪಡುಬೆಳ್ಳೆ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ, ಮತದಾನ ಮಾಡಿರುವ ಅವರು, ಬಳಿಕ ನಿಶ್ಛಿತಾರ್ಥ ಮುಗಿಸಿ ಮತಗಟ್ಟೆ ಬಳಿ ಬಂದು ಸಂಜೆಯವರೆಗೂ ಅಲ್ಲೇ ಇದ್ದರು ಎಂದು ತಿಳಿದುಬಂದಿದೆ.
ಅಂಪಾರಿನಲ್ಲಿ ಗುಂಪುಗಳ ಮಧ್ಯೆ ವಾಗ್ವಾದ
ಕುಂದಾಪುರ ತಾಲೂಕಿನ ಅಂಪಾರಿನಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ವಾಹನಗಳಲ್ಲಿ ಕರೆ ತರುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿರುವ ಬಗ್ಗೆ ವರದಿಯಾಗಿದೆ.
ಅಭ್ಯರ್ಥಿಗಳ ಪರ ಬೆಂಬಲಿಗರು ತಮ್ಮ ಖಾಸಗಿ ವಾಹನಗಳಲ್ಲಿ ಮತದಾರ ರನ್ನು ಮತಗಟ್ಟೆಗಳಿಗೆ ತರುತ್ತಿರುವುದನ್ನು ನೋಡಿದ ಪ್ರತಿ ಸ್ಪರ್ಧಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಬಳಿಕ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು.
2 ಹಂತಗಳಲ್ಲಿ ಒಟ್ಟು ಶೇ.74.78 ಮತದಾನ
ಉಡುಪಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಒಟ್ಟು ಏಳು ತಾಲೂಕುಗಳಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಒಟ್ಟು ಶೇ.74.78ರಷ್ಟು ಮತದಾನ ಆಗಿರುವುದು ವರದಿಯಾಗಿದೆ.
ಮೊದಲ ಹಂತದಲ್ಲಿ ಉಡುಪಿ, ಬೈಂದೂರು, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕಿನಲ್ಲಿ ನಡೆದ ಚುನಾವಣೆಯಲ್ಲಿ ಶೇ.74.04ರಷ್ಟು ಮತದಾನ ಆಗಿತ್ತು. ಇದೀಗ ಎರಡನೆ ಹಂತದಲ್ಲಿ ಕಾರ್ಕಳ, ಕುಂದಾಪುರ ಹಾಗೂ ಕಾಪು ತಾಲೂಕಿ ನಲ್ಲಿ ನಡೆದ ಚುನಾವಣೆಗೆ ಶೇ.75.42ರಷ್ಟು ಮತದಾನ ಆಗಿದೆ.
''ಜಿಲ್ಲೆಯ ಮೂರು ತಾಲೂಕುಗಳಲ್ಲಿ ಎರಡನೇ ಹಂತದ ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯ ಎಲ್ಲೂ ಯಾವುದೇ ರೀತಿ ಗೊಂದಲ ಹಾಗೂ ಅಹಿತಕರ ಘಟನೆಗಳು ನಡೆದಿಲ್ಲ. ಸಂಜೆ ಆರು ಗಂಟೆಗೆ ದೊರೆತ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ.75.64ರಷ್ಟು ಮತದಾನ ಆಗಿದೆ.''
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ