‘ಇರ್ನೂದೆದ ಒಂಜಿ ನೋಟು’ ತುಳು ಕಥಾಸಂಕಲನ ಬಿಡುಗಡೆ
ಉಡುಪಿ, ಡಿ.28: ಅತ್ತೆ-ಸೊಸೆ ಮಧುರ ಬಾಂಧವ್ಯ ಇಟ್ಟು ಕೊಂಡರೆ ಅಂತಹ ಸಂಸಾರವು ಸುಮಧುರವಾಗಿರುತ್ತದೆ ಅಲ್ಲಿ ಹುಟ್ಟಿ ಬಂದ ಸಾಹಿತ್ಯವು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತದೆ ಅಂತಹ ಸಂಸಾರದಲ್ಲಿ ಅನೇಕ ಕಥೆಗಳು ಹುಟ್ಟುತ್ತವೆ ಎಂದು ಅಂಬಲ ಪಾಡಿ ಶ್ರೀಜನಾದರ್ನ ಮಹಾ ಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ದೊಡ್ಡಣಗುಡ್ಡೆ ಕ್ಷಿಪ್ರ-ಪದ್ಮ ಪ್ರಕಾಶನದ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ವಾಸಂತಿ ಅಂಬಲಪಾಡಿ ಬರೆದ ‘ಇರ್ನೂದೆದ ಒಂಜಿ ನೋಟು’ ತುಳು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ನಗರಾಭಿವೃದ್ದಿ ಪಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಬಾಬು ಪೂಜಾರಿ ಉಪ್ಪಿನಕೋಟೆ, ಜಯಂತಿ ಬಾಬು ಪೂಜಾರಿ, ಬೇಬಿ ಜತ್ತನ್, ಸೀಯಾ, ಭೂಮಿಾ, ಪದ್ಮಪ್ರಸಾದ ಉಪಸ್ಥಿತರಿದ್ದರು.
ಸೀತಾರಾಮ ಪೂಜಾರಿ ಬ್ರಹ್ಮಾವರ ಕೃತಿ ಪರಿಚಯ ಮಾಡಿದರು. ಲೇಖಕಿ ವಾಸಂತಿ ಅಂಬಲಪಾಡಿ ಸ್ವಾಗತಿಸಿದರು. ಕ್ಷಿಪ್ರ ಪ್ರಸಾದ ವಂದಿಸಿದರು. ಅಶ್ವಿತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.