ಕಾರ್ಕಳ ಮತ ಎಣಿಕೆ ಕೇಂದ್ರದಲ್ಲಿ ಅವ್ಯವಸ್ಥೆ: ಫಲಿತಾಂಶದ ಮಾಹಿತಿ ಮಾಧ್ಯಮಕ್ಕೆ ನೀಡುವಲ್ಲಿ ವಿಳಂಬ
ಕಾರ್ಕಳ, ಡಿ.30: ಕಾರ್ಕಳ ಮತ ಎಣಿಕೆ ಕೇಂದ್ರದಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳದೇ, ಸ್ವತಃ ಅಧಿಕಾರಿಗಳೇ ಮೊಬೈಲ್ ಬಳಸಿ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿಗಳನ್ನು ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ನೀಡುತ್ತಿದ್ದುದು ಕಂಡುಬರುತ್ತಿದ್ದು, ಅವ್ಯವಸ್ಥೆ ಕಂಡುಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಅಭ್ಯರ್ಥಿಗಳಲ್ಲದೇ ಕೆಲವು ಪಕ್ಷದ ಕಾರ್ಯಕರ್ತರು ಕೂಡಾ ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶಿಸಿ ಎಣಿಕೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದು ಕಂಡುಬರುತ್ತಿದೆ.
ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಜಿ. ಅವರು ಕಾರ್ಕಳದ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದಾಗ ಇಲ್ಲಿನ ಅವ್ಯವಸ್ಥೆ ಬಗ್ಗೆ ಮಾಧ್ಯಮದವರು ಗಮನಸೆಳೆದರೂ ಪ್ರಯೋಜನವಾಗಿಲ್ಲ. ಮಾತ್ರವಲ್ಲದೇ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಅನುಮತಿಸುವುದಿಲ್ಲ ಎಂದರು. ಇದರಿಂದ ಅಸಮಾಧಾನಗೊಂಡ ಮಾಧ್ಯಮದವರು ತಮಗೆ ತಹಶೀಲ್ದಾರ್ ನೀಡಿದ ಗುರುತು ಚೀಟಿಯನ್ನು ಹಿಂತಿರುಗಿಸಲು ಮುಂದಾದಾದ ಘಟನೆಯೂ ನಡೆಯಿತು.
ಮತ ಎಣಿಕೆ ಕೇಂದ್ರದ ಹೊರಗಡೆ ಟೆಂಟ್ ಹಾಕಿ ಅದರಲ್ಲಿ ಮಾಧ್ಯಮದವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಮಾಧ್ಯಮದವರಿಗೆ ಮತ ಎಣಿಕೆ ಕೇಂದ್ರದಿಂದ ಫಲಿತಾಂಶದ ಮಾಹಿತಿಯನ್ನು ತಲುಪಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದ್ದರು. ಈ ಎಲ್ಲ ಬೆಳವಣಿಗೆಯ ಕುರಿತು ಜಿಲ್ಲಾಧಿಕಾರಿಯವರಲ್ಲಿ ಪತ್ರಕರ್ತರು ತಮ್ಮ ಅಳಲನ್ನು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ.