ಉಡುಪಿ: ಚರ್ಚುಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ, ಪೂಜೆ
ಉಡುಪಿ, ಜ.1: ನೂತನ ವರ್ಷವನ್ನು ಉಡುಪಿ ಜಿಲ್ಲೆಯ ಕ್ರೈಸ್ತರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಸ್ವಾಗತಿಸಿದರು. ಗುರುವಾರ ಸಂಜೆಯ ವೇಳೆ ಇಗರ್ಜಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಉಡುಪಿಯ ಬಿಷಪ್ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಅಧಿಕೃತ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಗುರುವಾರ ರಾತ್ರಿ ಪವಿತ್ರ ಬಲಿಪೂಜೆ ಅರ್ಪಿಸಿದರು. ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಇತ್ತೀಚೆಗೆ ನೀಡಿದ ‘ನಾವೆಲ್ಲರೂ ಸಹೋದರ, ಸಹೋದರಿಯರು’ ಎಂಬ ವಿಶ್ವಪತ್ರದಲ್ಲಿ ಎಲ್ಲಾ ಮಾನವರು ತಮ್ಮ ಧರ್ಮ, ಜಾತಿ, ವರ್ಗ, ಪ್ರಾಂತ್ಯ, ಸಂಸ್ಕೃತಿ, ರೀತಿ-ರಿವಾಜುಗಳು ಇನ್ನಿತರ ಸೀಮೆಗಳನ್ನು ದಾಟಿ ಮಾನವೀಯತೆ ಎಂಬ ವಿಶ್ವ ಧರ್ಮದಡಿ ಒಂದಾಗಲು ಕರೆ ನೀಡಿದ್ದಾರೆ ಎಂದರು.
ತಮ್ಮೆಲ್ಲಾ ವೈಯಕ್ತಿಕತೆಯ ಹೊರತಾಗಿಯೂ ಸಹೋದರತ್ವ ಹಾಗೂ ಸಾಮಾಜಿಕ ಗೆಳೆತನಗಳು ಮಾನವರು ಪರಸ್ಪರ ಒಪ್ಪಿಕೊಳ್ಳಬೇಕಾದ ವೌಲ್ಯಗಳು. ನಾವೆಲ್ಲ ಪರಸ್ಪರ ಒಪ್ಪಿಕೊಂಡು, ಪ್ರಶಂಸಿಸಿ, ಪ್ರೀತಿಸುವ ಮುಕ್ತ ಮನೋಭಾವ ವುಳ್ಳವರಾಗಿರಬೇಕು. ಪ್ರಕೃತಿಯ ಪ್ರತಿ ವಸ್ತು ಹಾಗೂ ಜೀವಿಯನ್ನು ತನ್ನ ಸಹೋದರ ಮತ್ತು ಸಹೋದರಿ ಎಂದು ಒಪ್ಪಿಕೊಳ್ಳುವ ಮನೋಭಾವವಿರುವ ನಾವು ನಮ್ಮದೇ ರೀತಿಯ ರಕ್ತ-ಮಾಂಸದ ದೇಹವುಳ್ಳ ಪರರನ್ನು ಒಪ್ಪಿಕೊಳ್ಳಲೇ ಬೇಕು ಎಂದವರು ಕರೆ ನೀಡಿದರು.
ಪವಿತ್ರ ಬಲಿಪೂಜೆಗೆ ಮುನ್ನ ಕಳೆದುಹೋಗಲಿರುವ 2020ನೇ ವರ್ಷದಲ್ಲಿ ದೇವರು ಮಾಡಿದ ಎಲ್ಲಾ ರೀತಿಯ ಉತ್ತಮ ಕೆಲಸಗಳಿಗಾಗಿ ಧನ್ಯವಾದ ಅರ್ಪಿಸಿ ಪರಮ ಪ್ರಸಾದದ ವಿಶೇಷ ಆರಾಧನೆಯನ್ನು ನೆರವೇರಿಸಲಾಯಿತು. 2021ರಲ್ಲಿ ವಿಶ್ವದಲ್ಲಿ ಶಾಂತಿ ನೆಲೆಸಲು ಹಾಗೂ ಕೊರೋನದಿಂದ ವಿಶ್ವಕ್ಕೆ ಮುಕ್ತಿ ದೊರಕುವಂತಾಗಲಿ ಎಂದು ಪ್ರಾರ್ಥಿಸಲಾಯಿತು.
ಸರಕಾರದ ಕೋವಿಡ್ ನಿಯಮಾವಳಿಯಂತೆ ಎಲ್ಲಾ ಚರ್ಚುಗಳಲ್ಲಿ ಸುರಕ್ಷಿತಾ ಅಂತರವನ್ನು ಕಾಯ್ದುಕೊಂಡು, ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ನಿಯಮಾವಳಿಯ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಚರ್ಚುಗಳಲ್ಲಿ ಸೀಮಿತ ಸಂಖ್ಯೆಯ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೆಚ್ಚಿನ ಚರ್ಚುಗಳಲ್ಲಿ ಬಲಿಪೂಜೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ಅವಕಾಶ ನೀಡಲಾಗಿತ್ತು.
ಮಿಲಾಗ್ರಿಸ್ ಕ್ಯಾಥಡ್ರಲ್ನ ರೆಕ್ಟರ್ ವಂ.ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ. ಕ್ಯಾನ್ಯೂಟ್ ನೊರೋನ್ಹ ಹಾಗೂ ಇತರ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.