ಸಾಂಸ್ಕತಿಕ ತೊಡಗಿಸಿಕೊಳ್ಳುವಿಕೆ ಇಂದಿನ ಅಗತ್ಯ: ಸುಧಾಕರ್ ಬೈಂದೂರು
ಕೊಕ್ಕರ್ಣೆ, ಜ.5: ಅತ್ಯಂತ ಆತಂಕದ ಈ ದಿನಗಳಲ್ಲಿ ಸಾಂಸ್ಕತಿಕವಾಗಿ ತೊಡಗಿಸಿಕೊಳ್ಳುವ ಮೂಲಕ ನಾವು ಮತ್ತೆ ಉಲ್ಲಾಸದ ಕ್ಷಣಗಳನ್ನು ಬರ ಮಾಡಿಕೊಳ್ಳಬಹುದು ಎಂದು ಬೈಂದೂರಿನ ಸುರಭಿಯ ನಿರ್ದೇಶಕ, ರಂಗಕರ್ಮಿ ಸುಧಾಕರ್ ಬೈಂದೂರು ಹೇಳಿದ್ದಾರೆ.
ಕೊಕ್ಕರ್ಣೆ ಸಮೀಪದ ಬಲ್ಲೆಬೈಲಿನಲ್ಲಿ, ಅರೆಹೊಳೆ ಪ್ರತಿಷ್ಠಾನ ಮತ್ತು ನಂದಗೋಕುಲ ಆಯೋಜಿಸಿದ್ದ ತ್ರಿದಿನ ರಂಗ ಶಿಬಿರ ಎನ್ಸೆಂಬಲ್ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿಯ ರಂಗ ನಿರ್ದೇಶಕ ರವಿರಾಜ್ ಎಚ್.ಪಿ. ಮಾತನಾಡಿ, ಒಂದು ದಶಕದ ಕಾಲ ಸಾಂಸ್ಕತಿಕ ರಾಯಭಾರಿಯಂತೆ ಮಂಗಳೂರಿನಲ್ಲಿ ಚಟುವಟಿಕೆಯಿಂದಿದ್ದ ಅರೆಹೊಳೆ ಪ್ರತಿಷ್ಠಾನ ಈಗ ಬಲ್ಲೆಬೈಲು ಮೂಲಕ ಗ್ರಾಮೀಣ ಪರಿಸರದಲ್ಲಿ ರಂಗ ಚಟುವಟಿಕೆ ಆರಂಭಿಸಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಶಾಂತ್ ಉದ್ಯಾವರ ಅವರನ್ನು ಸನ್ಮಾನಿಸಲಾಯಿತು. ಜಿಪಂ ಪ್ರತಾಪ್ ಹೆಗ್ಡೆ ಮಾರಾಳಿ, ಶ್ವೇತಾ ಅರೆಹೊಳೆ, ಗೀತಾ ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ವಿಶಾಲಾಕ್ಷಿ ರಾವ್ ವಂದಿಸಿದರು. ಕಾರ್ತಿಕ್ ಬ್ರಹ್ಮಾವರ ನಿರೂಪಿಸಿದರು. ನಂತರ ಶ್ವೇತಾ ಅರೆಹೊಳೆ ಮತ್ತು ತಂಡ ದಿಂದ ‘ನೃತ್ಯಾರಾಧನೆ’ ಹಾಗೂ ಶಿರಸಿಯ ಹನ್ನೆರಡು ವರ್ಷದ ಬಾಲ ಕಲಾವಿದೆ ತುಳಸಿ ಹೆಗಡೆಯಿಂದ ‘ವಂದೇ ಪರಮಾ ನಂದಮ್’ ಎಂಬ ಯಕ್ಷಗಾನ ರೂಪಕ ಪ್ರದರ್ಶನಗೊಂಡಿತು.