ಹಿಂಗಾರು ಬೆಳೆ ಸಮೀಕ್ಷೆ ಆರಂಭ
ಮಂಗಳೂರು, ಜ.5: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಖಾಸಗಿಯವರಿಂದ ಜ.1ರಿಂದ ಪ್ರಾರಂಭವಾಗಿದೆ.
ಹಿಂಗಾರು ಹಂಗಾಮಿನ ಬೆಳೆ ವಿವರಗಳನ್ನು ಹಿಂಗಾರು ಬೆಳೆ ಸಮೀಕ್ಷೆ ಆ್ಯಪ್ನಲ್ಲಿ ದಾಖಲಿಸಿ ಅಪ್ಲೋಡ್ ಮಾಡಲಾಗಿದೆ. ಬೆಳೆ ಮಾಹಿತಿ ಆಧಾರದ ಮೇಲೆ ಕನಿಷ್ಠ ಬೆಂಬಲ ನಿಗದಿ, ಬೆಳೆ ಪರಿಹಾರ-ಬೆಳೆ ವಿಮಾ ಯೋಜನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಅಡಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ, ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಆರ್ಟಿಸಿಯಲ್ಲಿ ಬೆಳೆ ವಿವರ ಇತ್ಯಾದಿ ದಾಖಲಾತಿಗಳನ್ನು ಈ ಸಮೀಕ್ಷಾ ವರದಿ ಆಧರಿಸಿ ನಡೆಸಲಾಗುತ್ತದೆ.
ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ಸರ್ವೆ ನಂಬರ್ವಾರು ವಾರಸುದಾರ ರೈತರ ಆಧಾರ್ ಮಾಹಿತಿಯನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆ ಸಮೀಕ್ಷೆ ನಡೆಸುವ ಖಾಸಗಿಯವರಿಗೆ ತಮ್ಮ ಆಧಾರ್ ವಿವರವನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳು/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ತೋಟಗಾರಿಕಾ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.