ಬ್ಯಾಂಕ್ ವಸೂಲಾತಿಯಲ್ಲಿ ಅಕ್ರಮ ಆರೋಪ : ಪಿಯುಸಿಎಲ್ನಿಂದ ಪ್ರತಿಭಟನೆ
ಮಂಗಳೂರು, ಜ.7: ಬ್ಯಾಂಕ್ ವಸೂಲಾತಿ ಪ್ರಕರಣಗಳಲ್ಲಿ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಪಿಯುಸಿಎಲ್ ದ.ಕ. ಜಿಲ್ಲಾ ಘಟಕವು ನಗರದ ಕ್ಲಾಕ್ ಟವರ್ ಬಳಿ ಗುರುವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಿಯುಸಿಎಲ್ನ ಜಿಲ್ಲಾ ಘಟಕದ ಸದಸ್ಯ ಮುಹಮ್ಮದ್ ಹನೀಫ್ ಯು. ಪಾಜಪಳ್ಳ, 2020ರಲ್ಲಿ 1.85 ಲಕ್ಷ ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆಗಳು ನಡೆದಿವೆ ಎಂಬುದಾಗಿ ಆರ್ಬಿಐ ವರದಿ ತಿಳಿಸಿದೆ. ಈ ಮೊತ್ತ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ. ಈ ಸಂದರ್ಭ ಜಿಲ್ಲೆಯಲ್ಲಿ ಕೆಲವು ಬ್ಯಾಂಕ್ ಅಧಿಕಾರಿಗಳು ನಡಾವಳಿಗಳು ಇಲ್ಲದೇ ಜಪ್ತಿ ಮೂಲಕ ವಸೂಲಾತಿ ಮಾಡುತ್ತಿದ್ದಾರೆ. ಇದರಲ್ಲಿ ಹಲವು ವಸೂಲಾತಿಗಳು ಅಕ್ರಮವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಮುಂದಿನ ಬ್ಯಾಂಕ್ ವಸೂಲಾತಿಯಲ್ಲಿ ದ.ಕ. ಜಿಲ್ಲಾಧಿಕಾರಿಯವರು ಜವಾಬ್ದಾರಿ ವಹಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಈ ಹೋರಾಟ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗದೇ ಇಡೀ ಕರ್ನಾಟಕಕ್ಕೆ ಅನ್ವಯವಾಗಲಿದೆ ಎಂದು ಅವರು ಹೇಳಿದರು.
ಪಿಯುಸಿಎಲ್ನ ಜಿಲ್ಲಾಧ್ಯಕ್ಷ ಈಶ್ವರ್ರಾಜ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ಬ್ಯಾಂಕ್ ವಸೂಲಾತಿ ಪ್ರಕರಣಗಳಲ್ಲಿ ಅಕ್ರಮ ನಡೆದಿವೆ. ಫರಂಗಿಪೇಟೆ ಮೂಲದ ವ್ಯಕ್ತಿಯೊಬ್ಬರು ನಗರದ ರಾಷ್ಟ್ರೀಕೃತ ಬ್ಯಾಂಕ್ವೊಂದರಿಂದ ಯಾವುದೇ ಸಾಲ ಪಡೆದಿಲ್ಲ. ಆದಾಗ್ಯೂ, ಸಂತ್ರಸ್ತರ ವಿರುದ್ಧ ಲೋನ್ ವಂಚನೆಯ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿಯು ಬ್ಯಾಂಕ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಿಯುಸಿಎಲ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಜಯ್ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು.