ಆನ್ ಲೈನ್ ನಲ್ಲಿ ವಂಚನೆಗೆ ಯತ್ನ : ದೂರು
ಬಂಟ್ವಾಳ, ಜ.7: ಆನ್ ಲೈನ್ ವಂಚಕರ ಜಾಲ ವಿಟ್ಲದ ನಿವೃತ್ತ ಶಿಕ್ಷಕರೊಬ್ಬರ ಫೇಸ್ ಬುಕ್ ಬಳಸಿ ಅವರ ಪರಿಚಯದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬ್ಯಾಂಕ್ ವಿವರ ಪಡೆಯಲು ಯತ್ನಿಸಿದ ಘಟನೆ ನಡೆದಿದೆ.
ಕೇಪು ಗ್ರಾಮದ ಕರವೀರ ನಿವಾಸಿ ನಿವೃತ್ತ ಶಿಕ್ಷಕ, ಸಾಹಿತಿ ಭಾಸ್ಕರ್ ಅಡ್ವಾಳ ಅವರ ಫೇಸ್ ಬುಕ್ ಬಳಸಿ ಅಳಿಕೆ ಸತ್ಯಸಾಯಿ ಲೋಕಾ ಸೇವಾ ವಿದ್ಯಾ ಸಂಸ್ಥೆಯ ಚಂದ್ರಶೇಖರ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಹಣ ಲಪಾಟಾಯಿಸಲು ಯತ್ನಿಸಿದ್ದಾನೆ. ಈ ಬಗ್ಗೆ ಭಾಸ್ಕರ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ದೂರು ನೀಡಿದರೂ ಆತನ ತನ್ನ ವಂಚನೆಯ ಚಾಲಿ ಮುಂದುವರಿಸಿದ್ದು, ಪುನಃ ರಾತ್ರಿ ಜಯಲಕ್ಷ್ಮೀ ಇಡ್ಕಿದು ಅವರಿಗೂ ಕರೆ ಮಾಡಿ ವಂಚನೆ ಮಾಡಲು ಯತ್ನಿಸಿದ್ದಾನೆ. ಬಳಿಕ 11:15 ಗಂಟೆಗೆ ಅಜೇಯ ವಿಟ್ಲ ಅವರಿಗೂ ಕರೆ ಮಾಡಿ ಸಂಭಾಷಣೆ ನಡೆಸಿದ್ದಾರೆ. ಈ ಬಗ್ಗೆ ಭಾಸ್ಕರ್ ಅವರು ಮತ್ತೆ ವಿಟ್ಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತಕ್ಷಣವೇ ಆತನನ್ನು ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.