ಮಂಗಳೂರು-ಕಲ್ಬುರ್ಗಿ ಮಧ್ಯೆ ವಿಮಾನ ಸೇವೆ ಆರಂಭಕ್ಕೆ ದ.ಕ.ಸಂಘ ಮನವಿ
ಮಂಗಳೂರು, ಜ.12: ಕಲಬುರ್ಗಿಯಿಂದ ಮಂಗಳೂರಿಗೆ ವಿಮಾನಯಾನ ಆರಂಭಿಸುವಂತೆ ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಡಾ.ಸದಾನಂದ ಪೆರ್ಲ ನೇತೃತ್ವದ ನಿಯೋಗವು ಸಂಸದ ಡಾ. ಉಮೇಶ ಜಾದವ್ ಮತ್ತು ಸ್ಟಾರ್ ಏರ್ ಮಾರುಕಟ್ಟೆ ಹಾಗೂ ಸಂವಹನ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಜ್ ಹೇಸಿ ಅವರಿಗೆ ಮನವಿ ಸಲ್ಲಿಸಿತು.
ಕರಾವಳಿಗೆ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಮತ್ತು ಲಾತೂರ್, ಜಮೀರಾಬಾದ್ ಅಕ್ಕಲಕೋಟೆ ಮುಂತಾದೆಡೆಗಳಿಂದ ಸಾವಿರಾರು ಸಂಖ್ಯೆಯ ಜನರು ಶಿಕ್ಷಣ, ಆರೋಗ್ಯ ಪ್ರವಾಸೋದ್ಯಮ, ವಾಣಿಜ್ಯ ವಹಿವಾಟಿಗಾಗಿ ಕರಾವಳಿಗೆ ತೆರಳುತ್ತಿದ್ದಾರೆ. ಸುಮಾರು 10ರಷ್ಟು ಖಾಸಗಿ ಬಸ್ಗಳಲ್ಲಿ ಮತ್ತು ಸೋಲಾಪೂರ -ಹಾಸನ ರೈಲುಗಾಡಿಯಲ್ಲಿ ಇದೀಗ ಸಂಚರಿಸುತ್ತಿದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ಸೇವೆ ತುರ್ತು ಅಗತ್ಯ ಎಂದು ನಿಯೋಗವು ಮನವರಿಕೆ ಮಾಡಿತು.
ತುರ್ತು ಅಗತ್ಯಕ್ಕಾಗಿ ಇದೀಗ ಹೈದರಾಬಾದ್ಗೆ ತೆರಳಿ ವಿಮಾನದ ಮೂಲಕ ಮಂಗಳೂರು ಸಂಚಾರ ಮಾಡುತ್ತಿದ್ದು, ಇದು ತ್ರಾಸದಾಯಕವಾಗಿದೆ. ಹೈದರಾಬಾದ್- ಕಲ್ಬುರ್ಗಿ- ಮಂಗಳೂರು, ಕಲ್ಬುರ್ಗಿ- ಬೆಂಗಳೂರು- ಮಂಗಳೂರು, ಕಲ್ಬುರ್ಗಿ-ಹುಬ್ಬಳ್ಳಿ-ಮಂಗಳೂರು ಮತ್ತು ಕಲ್ಬುರ್ಗಿ-ಮುಂಬೈ-ಮಂಗಳೂರು ಈ ನಾಲ್ಕು ರೂಟ್ಗಳ ಪ್ರಸ್ತಾಪ ಮಾಡಲಾಗಿದೆ ಎಂದು ಸದಾನಂದ ಪೆರ್ಲ ತಿಳಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ, ಕರ್ನಾಟಕ ರಾಜ್ಯ ಹೋಟೆಲ್ ಮತ್ತು ರೆಸ್ಟಾರೆಂಟ್ ಮಾಲಕರ ಸಂಘದ ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷ ಸತ್ಯನಾಥ ಶೆಟ್ಟಿ, ಕಲ್ಬುರ್ಗಿ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಂಡನ್, ರಾಜ್ಯ ಪದಾಧಿಕಾರಿ ಸಮಿತಿ ಸದಸ್ಯ ಪ್ರವಿಣ್ ಜತ್ತನ್, ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಮರನಾಥ ಪಾಟೀಲ್ ನಿಯೋಗದಲ್ಲಿದ್ದರು.