“ಅಪರಾಧ ಬರ್ಬರವಾಗಿದ್ದರೂ ಆರೋಪಿಗೆ ಶಿಕ್ಷೆ ನಿರ್ಣಯಿಸುವಾಗ ಕಾನೂನಾತ್ಮಕ ಪುರಾವೆಗೆ ವಿನಾಯತಿ ನೀಡುವುದಿಲ್ಲ”
ಪಾಟ್ನಾ ಹೈಕೋರ್ಟ್
ಹೊಸದಿಲ್ಲಿ, ಎ. 7: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿರುವ ಪಾಟ್ನಾ ಉಚ್ಚ ನ್ಯಾಯಾಲಯ, “ಅಪರಾಧ ಬರ್ಬರವಾಗಿದ್ದರೂ ಆರೋಪಿಗೆ ಶಿಕ್ಷೆ ನಿರ್ಣಯಿಸುವಾಗ ಕಾನೂನಾತ್ಮಕ ಪುರಾವೆಗೆ ವಿನಾಯತಿ ನೀಡುವುದಿಲ್ಲ” ಎಂದಿದೆ.
2012ರಲ್ಲಿ 13 ವರ್ಷದ ಶಾಲಾ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಕೆಳ ನ್ಯಾಯಾಲಯ ನೀಡಿರುವ ತೀರ್ಪನ್ನು ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಸಿಂಗ್ ಹಾಗೂ ಅರವಿಂದ ಶ್ರೀವಾತ್ಸವ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಬದಿಗಿರಿಸಿದೆ.
ಅಪರಾಧ ಬರ್ಬರವಾಗಿದೆ ಹಾಗೂ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಆರೋಪಿಯ ವಿರುದ್ಧದ ಕಾನೂನು ಪುರಾವೆಗಳ ಗೈರಿನಲ್ಲಿ ಆರೋಪಿ-ಮನವಿದಾರನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಶಾಲೆಗೆ ಹೋದ ತನ್ನ ಪುತ್ರಿ ನಾಪತ್ತೆಯಾಗಿದ್ದಾಳೆ. ಅನಂತರ ಮುಸುಕಿನ ಜೋಳದ ಹೊಲದಲ್ಲಿ ಪತ್ತೆಯಾಗಿದ್ದಾಳೆ ಎಂದು ಬಾಲಕಿಯ ತಾಯಿ ದೂರು ಸಲ್ಲಿಸಿದ ಬಳಿಕ 2012 ಮೇಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಪ್ರಕರಣದ ಆರೋಪಿ 10 ವರ್ಷದ ಬಾಲಕನಾಗಿದ್ದುದರಿಂದ ವಿಚಾರಣೆಯಲ್ಲಿ ಹಿಂಜರಿತ ಉಂಟಾಗಿತ್ತು ಎಂದು ವರದಿ ಹೇಳಿದೆ.
ಮ್ಯಾಜಿಸ್ಟೇಟ್ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ ಬಾಲಕ, ಪ್ರಕರಣದ ಓರ್ವ ಆರೋಪಿಯಾಗಿರುವ ಪ್ರಶಾಂತ್ ಕುಮಾರ್ ಮೆಹ್ತಾ ತನ್ನ ಹಾಗೂ ಸಂತ್ರಸ್ತ ಬಾಲಕಿಯ ಅದ್ಯಾಪಕನಾಗಿದ್ದ. ಬಾಲಕಿಯನ್ನು ವಿವಾಹವಾಗುವುದಾಗಿ ಆತ ಭರವಸೆ ನೀಡಿದ್ದ ಎಂದು ಹೇಳಿದ್ದ.