ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ ಶಿಫಾರಸ್ಸು ಸಾಧ್ಯವಿಲ್ಲ: ಸರಕಾರದ ಸ್ಪಷ್ಟನೆ
''ನೌಕರರು ಹಠ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು''
ಬೆಂಗಳೂರು, ಎ.8: ತಕ್ಷಣ ಮಧ್ಯಂತರ ಪರಿಹಾರವಾಗಿ ಶೇ.10ರಷ್ಟು ವೇತನ ಪರಿಷ್ಕರಣೆಗೆ ನಾವು ಸಿದ್ಧ. ಉಳಿದ ಶೇ.2ರಷ್ಟು ನಂತರದ ದಿನಗಳಲ್ಲಿ ಹೆಚ್ಚಿಸಬಹುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಝ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರಬೇಕು. ನಾವು ಈಗಲೂ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದರು.
ಪ್ರತಿದಿನ ಸಂಸ್ಥೆಗೆ 20 ಕೋಟಿ ರೂ. ನಷ್ಟವಾಗುತ್ತಿದೆ. ಈಗಾಗಲೇ 40 ಕೋಟಿ ನಷ್ಟವಾಗಿದೆ. ಹಾಗಾಗಿ ನೌಕರರು ತಮ್ಮ ಹಠ ಬಿಟ್ಟು ಕರ್ತವ್ಯಕ್ಕೆ ಬರಬೇಕು. ಸಂಸ್ಥೆಗೆ ನಷ್ಟವಾದರೆ ಅದು ಮತ್ತೆ ಬರಲ್ಲ. ದಯವಿಟ್ಟು ನೀವು ಕರ್ತವ್ಯಕ್ಕೆ ಬನ್ನಿ ಎಂದು ಮನವಿ ಮಾಡಿದರು.
9 ಬೇಡಿಕೆಗಳಲ್ಲಿ ಈಗಾಗಲೇ 8ನ್ನು ಈಡೇರಿಸಿದ್ದೇವೆ. ಆದರೆ ಸರಕಾರಿ ನೌಕರರಿಗೆ ನೀಡಲಾಗುವ ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಸರಿ ಸಮನಾದ ವೇತನ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಎಸ್ಮಾ ಜಾರಿ ಮಾಡಲು ನಮಗೆ ಅವಕಾಶವಿದೆ. ಅನಿವಾರ್ಯವಾದರೆ ಎಸ್ಮಾ ಜಾರಿ ಖಂಡಿತಾ ಮಾಡುತ್ತೇವೆ ಎಂದು ಅಂಜುಂ ಪರ್ವೇಝ್ ತಿಳಿಸಿದರು.