ಉದ್ಯಮಿ, ಸಮಾಜ ಸೇವಕ ಡಾ.ಎಸ್.ಎಸ್.ಎ. ಖಾದರ್ ನಿಧನ
ಬೆಂಗಳೂರು, ಎ.16: ಬೆಂಗಳೂರಿನ ಪ್ರತಿಷ್ಠಿತ ಜುಮ್ಮಾ ಮಸ್ಜಿದ್ ಟ್ರಸ್ಟ್ ಬೋರ್ಡ್, ಕೈಕಾ ಫೌಂಡೇಶನ್, ಕೈಕಾ ಫೌಂಡೇಶನ್ ಫಾರ್ ಹೈಯರ್ ಸ್ಟಡೀಸ್, ಮರ್ಕಿನ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಕೇರಳದ ಕ್ಯಾಲಿಕಟ್ ಮರ್ಕಝ್ನ ಉಪಾಧ್ಯಕ್ಷ ಡಾ.ಎಸ್.ಎಸ್.ಎ.ಖಾದರ್(75) ಶುಕ್ರವಾರ ನಿಧನ ಹೊಂದಿದರು.
ಇಸ್ಲಾಮಿಕ್ ಎಜುಕೇಷನ್ ಬೋರ್ಡ್ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದ ಎಸ್.ಎಸ್.ಎ.ಖಾದರ್, ಉದ್ಯಮಿಯಾಗಿ, ಸಮಾಜ ಸೇವಕನಾಗಿ ಸಾಕಷ್ಟು ಜನಮನ್ನಣೆಗಳಿಸಿದ್ದರು. ವಯೋಸಹಜ ಅನಾರೋಗ್ಯದಿಂದಲೂ ಬಳಲುತ್ತಿದ್ದ ಇವರನ್ನು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಶಿಫಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.
ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಖಾದರ್ ಪಡೆದಿದ್ದರು. ಆನಂತರ ಅವರಲ್ಲಿ ಅನಾರೋಗ್ಯ ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜುಮ್ಮಾ ಮಸ್ಜೀದ್ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಖಾದರ್ ಅವರ ಪತ್ನಿ ಈ ಮೊದಲೆ ನಿಧನ ಹೊಂದಿದ್ದು, ಇದೀಗ ಅವರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ದಫನ್ ಕಾರ್ಯವನ್ನು ಶಾಂತಿನಗರದ ಖಬರಸ್ತಾನ್ನಲ್ಲಿ ಸಂಜೆ ನೆರವೇರಿಸಲಾಯಿತು.