ಭದ್ರಾವತಿ ನಗರಸಭೆ ಕಾಂಗ್ರೆಸ್ ಅಭ್ಯರ್ಥಿ ಹೃದಯಾಘಾತದಿಂದ ಸಾವು
ಶಿವಮೊಗ್ಗ, ಎ.19: ಭದ್ರಾವತಿ ನಗರ ಸಭೆಯ ಕಾಂಗ್ರೆಸ್ ಅಭ್ಯರ್ಥಿ ಉಸಿರಾಟದ ತೊಂದರೆಯಿಂದ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.
ಶ್ರುತಿ ಮಂಜುನಾಥ್(34) ಮೃತ ಮಹಿಳೆ. ನಗರಸಭೆಯ ವಾರ್ಡ್ ನಂ.29ರಲ್ಲಿ ಕಾಂಗ್ರೆಸ್ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಅವರು ಕಣದಲ್ಲಿದ್ದರು.
ಸೋಮವಾರ ಬೆಳಗ್ಗೆ ಮತ ಪ್ರಚಾರ ಕೂಡ ಮಾಡಿದ್ದಾರೆ. ಆದರೆ, ಏಕಾಏಕಿ ಉಸಿರಾಟದ ತೊಂದರೆಯಾಗಿದ್ದು, ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ನಂತರ, ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಮೃತಪಟ್ಟಿದ್ದಾರೆ.
ಸೋಮವಾರ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಏಕಾಏಕಿ ಅಭ್ಯರ್ಥಿ ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ನಿಯಮದ ಪ್ರಕಾರ ಮತದಾನಕ್ಕೂ ಮುನ್ನ ಅಭ್ಯರ್ಥಿ ಅಕಾಲಿಕವಾಗಿ ನಿಧನ ಹೊಂದಿದರೆ ಅಂತಹ ಸಂದರ್ಭದಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಚುನಾವಣೆ ಆಯೋಗಕ್ಕೆ ಅಭ್ಯರ್ಥಿಯ ನಿಧನದ ಬಗ್ಗೆ ವರದಿ ಸಲ್ಲಿಸಬೇಕಾಗುತ್ತದೆ. ನಂತರ, ಆಯೋಗ ಈ ನಿಟ್ಟಿನಲ್ಲಿ ಪ್ರತ್ಯೇಕ ಆದೇಶ ಹೊರಡಿಸುತ್ತದೆ.
Next Story