ಮಂಗಳೂರು: ಕೊರೋನ ಆತಂಕದ ನಡುವೆ ಸುಳ್ಳು ಸಂದೇಶಗಳ ಹಾವಳಿ!
ಸಾಂದರ್ಭಿಕ ಚಿತ್ರ
ಮಂಗಳೂರು, ಎ.20: ಕೊರೋನ ಸೋಂಕಿತರ ಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಆತಂಕದ ಜತೆಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳ ಹಾವಳಿಯೂ ಹೆಚ್ಚಾಗತೊಡಗಿದೆ.
ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತದ ಹೆಸರಿನಲ್ಲಿ ಕೊರೋನಕ್ಕೆ ಸಂಬಂಧಿಸಿದ ಸುಳ್ಳು ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ.
ಇಂದು ಸಂಜೆಯ ವೇಳೆಗೆ ವಾಟ್ಸಾಪ್ಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿನಲ್ಲಿ ಬೆಂದೂರು ಪ್ರದೇಶ ಕಂಟೇನ್ಮೆಂಟ್ ಝೋನ್ ಆಗಿದೆ ಎಂಬ ಸಂದೇಶವೊಂದು ವಾಟ್ಸಾಪ್ಗಳಲ್ಲಿ ಹರಿಬಿಡುವ ಮೂಲಕ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಲಾಗಿದೆ.
ಇಂಗ್ಲಿಷ್ನಲ್ಲಿರುವ ಈ ಸಂದೇಶದಲ್ಲಿ, 117 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸಂಪೂರ್ಣ ಬೆಂದೂರು, ಲೋವರ್ ಬೆಂದೂರು, ಶಿವಭಾಗ, ಬೆಥನಿ ರೋಡ್ ಕಂಟೆನ್ಮೆಂಟ್ ಝೋನ್ ಎಂದು ಹೇಳಲಾಗಿದೆ.
ಸಾರ್ವಜನಿಕರು ಕೂಡಾ ಇಂತಹ ಅಧಿಕೃತವಲ್ಲದ, ಯಾವುದೇ ಗ್ರೂಪ್ ಅಥವಾ ಸಂಪರ್ಕ ಸಂಖ್ಯೆಯ ಮೂಲಕ ಬರುವ ಸಂದೇಶಗಳನ್ನು ಅಧಿಕೃತ ಆಡಳಿತ ಅಥವಾ ವ್ಯಕ್ತಿಗಳಿಂದ ಖಾತರಿಪಡಿಸಿಕೊಳ್ಳದೆ ಯಾರೊಬ್ಬರಿಗೂ ಹಂಚದೆ, ಜವಾಬ್ಧಾರಿಯನ್ನು ಕಾಯ್ದುಕೊಳ್ಳಬೇಕಾಗಿದೆ.
ಈ ಬಗ್ಗೆ 'ವಾರ್ತಾಭಾರತಿ' ಮನಪಾ ಆಯುಕ್ತರಾದ ಅಕ್ಷಯ್ ಶ್ರೀಧರ್ರನ್ನು ಸಂಪರ್ಕಿಸಿದ್ದು, "ಇದು ಸುಳ್ಳು ಸಂದೇಶ. ಮನಪಾದಿಂದ ಯಾವುದೇ ಕಂಟೇನ್ಮೆಂಟ್ ವಲಯ ಘೋಷಣೆ ಮಾಡಲಾಗಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಅವರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸಂದೇಶ ಎಂದು ಹೇಳಿದ್ದಾರೆ. ಬೆಥನಿಯಲ್ಲಿ 19 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದವರು ಹೇಳಿದ್ದಾರೆ.