ಬಸ್ ಉರುಳಿ ಬಿದ್ದು ಮೂವರು ವಲಸೆ ಕಾರ್ಮಿಕರು ಮೃತ್ಯು
ಹೊಸದಿಲ್ಲಿ: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಹೆದ್ದಾರಿಯಲ್ಲಿ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್ ಉರುಳಿ ಬಿದ್ದ ಪರಿಣಾಮವಾಗಿ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ನಡೆದಾಗ ಬಸ್ ದಿಲ್ಲಿಯಿಂದ ಮಧ್ಯಪ್ರದೇಶದ ತಿಕಮ್ ಗಡಕ್ಕೆ ತೆರಳುತ್ತಿತ್ತು.
ಅಪಘಾತದಲ್ಲಿ 12 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ. ಬಸ್ನಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಪೊಲೀಸರು ಸ್ಥಳಕ್ಕೆ ತಲುಪಿದ್ದು ಗಾಯಗೊಂಡ ಎಲ್ಲರನ್ನು ಗ್ವಾಲಿಯರ್ನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸುಮಾರು 100 ಜನರು ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಹಲವರು ಬಸ್ ಛಾವಣಿಯ ಮೇಲೆ ಕುಳಿತಿದ್ದರು ಎಂದು ಬಸ್ನ ಪ್ರಯಾಣಿಕರಾದ ಗ ಗಣಪತ್ ಲಾಲ್ ಹೇಳಿದ್ದಾರೆ.
ದಿಲ್ಲಿಯಿಂದ ತಿಕಮ್ ಗಡಕ್ಕೆ ಸಾಗಿಸಲು ಬಸ್ ಕಂಡಕ್ಟರ್ ಪ್ರತಿ ಪ್ರಯಾಣಿಕರಿಂದ 700 ರೂ. ಪಡೆದಿದ್ದ. ಸೋಮವಾರ ರಾತ್ರಿ ಚಾಲಕ ಸಹಿತ ಬಸ್ ಸಿಬ್ಬಂದಿ ಮಾರ್ಗಮಧ್ಯೆ ರಾಜಸ್ಥಾನದ ಡೋಲಾಪುರದಲ್ಲಿ ಊಟದ ವೇಳೆ ಮದ್ಯ ಸೇವಿಸಿದ್ದರು. ಮೊದಲಿಗೆ ಡೋಲಾಪುರದಲ್ಲಿ ಟ್ರಕ್ ವೊಂದಕ್ಕೆ ಬಸ್ ಢಿಕ್ಕಿ ಹೊಡೆದಿತ್ತು. ಆ ಬಳಿಕ ಗ್ವಾಲಿಯರ್ ಬಳಿ ಜೌರಾಸಿ ಘಾಟ್ ನಲ್ಲಿ ತಿರುವೊಂದರಲ್ಲಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರಣ ಅದು ಉರುಳಿಬಿದ್ದಿದೆ ಎಂದು ಗಣಪತ್ ಲಾಲ್ ಪಿಟಿಐಗೆ ತಿಳಿಸಿದ್ದಾರೆ.