ಉಡುಪಿ: ವಿವಿದೆಡೆ ಹಡಿಲು ಭೂಮಿ ಕೃಷಿಗೆ ಚಾಲನೆ
ಉಡುಪಿ, ಮೇ 5: ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಉಡುಪಿ ಇದರ ಆಶ್ರಯದಲ್ಲಿ ಸಾವಯುವ ಕೃಷಿ ಉತ್ಪನ್ನ ಬೆಳೆಸುವ ನಿಟ್ಟಿನಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಂಬಲಪಾಡಿ ವಾರ್ಡಿನ ಸುಮಾರು 25 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿೆಗಳಿಗೆ ಇಂದು ಚಾಲನೆ ನೀಡಲಾಯಿತು.
ಕೇದಾರೋತ್ಥಾನ ಟ್ರಸ್ಟಿನ ಕೋಶಾಧಿಕಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಕೇಂದ್ರದ ಬಳಿ ಸುರೇಶ್ ಶೆಟ್ಟಿ ಅವರ ಗದ್ದೆಗೆ ಹಾಲೆರೆಯುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಅಂಬಲಪಾಡಿ ಬಂಕೇರ್ಕಟ್ಟ ಪ್ರದೇಶದಲ್ಲಿ ಸುಮಾರು 10 ಎಕ್ರೆ ಹಡಿಲು ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆಯನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ ಕಪ್ಪೆಟ್ಟು, ಗ್ರಾಪಂ ಉಪಾಧ್ಯಕ್ಷ, ಗ್ರಾಮೋತ್ಥಾನ ಸಮಿತಿಯ ಗೌರವ ಸಲಹೆಗಾರ ಸೋಮನಾಥ್ ಬಿ.ಕೆ., ಗ್ರಾಪಂ ಪಿಡಿಒ ವಸಂತಿ, ಗ್ರಾಮೋತ್ಥಾನ ಸಮಿತಿಯ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ ಅಂಬಲಪಾಡಿ, ಗೌರವ ಸಲಹೆ ಗಾರ ರಾಜೇಂದ್ರ ಪಂದುಬೆಟ್ಟು, ಕೇಳು ನಾರಾಯಣ, ಸಹ ಸಂಚಾಲಕ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಹಡಿಲು ಗದ್ದೆಗಳ ಮಾಲಕರು ಹಾಗೂ ಕೃಷಿಕರು ಉಪಸ್ಥಿತರಿದ್ದರು.
ಪರ್ಕಳದಲ್ಲಿ: ಪರ್ಕಳ ವಾರ್ಡಿನಲ್ಲಿ ಸುಮಾರು ಅಂದಾಜು 100 ಎಕರೆ ಯಷ್ಟು ಹಡಿಲು ಕೃಷಿ ಭೂಮಿಗಳನ್ನು ಸ್ಥಳೀಯರು ಕೃಷಿ ಮಾಡಲು ತಯಾರಿ ನಡೆಸಿದ್ದು, ಶಾಸಕ ಕೆ.ರಘುಪತಿ ಭಟ್ ಇಂು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಹಲವಾರು ವರ್ಷಗಳಿಂದ ಹಡಿಲು ಬಿದ್ದ ಕೃಷಿ ಭೂಮಿಯು ಬಲ್ಲೆ, ಪೊದೆ, ಗಿಡಗಂಟೆ ಹುಲ್ಲುಗಳಿಂದ ಕೂಡಿದ್ದು, ಸುತ್ತಲಿನ ತೋಡಿನಲ್ಲಿ ಹೂಳು ತುಂಬಿತ್ತು. ಇದೀಗ ಎಲ್ಲವನ್ನೂ ತೆಗೆದು ಸಮತಟ್ಟುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಸ್ಥಳೀಯರಾದ ರಂಜಿತ್ ಶೆಟ್ಟಿ ಮತ್ತು ತಂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿದ್ದಾರೆ.