ಬೆಂಗಳೂರು: ಒತ್ತೆಹಣಕ್ಕಾಗಿ 10 ವರ್ಷ ಬಾಲಕನ ಕಗ್ಗೊಲೆ; ಆರೋಪ
ಬೆಂಗಳೂರು, ಜೂ.6: ಒತ್ತೆಹಣಕ್ಕಾಗಿ 10 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಕೊಲೆಗೈದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಶಿಕಾರಿಪಾಳ್ಯದ ಮುಹಮ್ಮದ್ ಆಸೀಫ್(10) ಕೊಲೆಯಾಗಿರುವ ಬಾಲಕ ಎಂದು ತಿಳಿದುಬಂದಿದೆ. ನಾಲ್ಕು ದಿನಗಳ ಹಿಂದೆಷ್ಟೇ ದುಷ್ಕರ್ಮಿಗಳು ಮುಹಮ್ಮದ್ ಆಸೀಫ್ ಅನ್ನು ಅಪಹರಣ ಮಾಡಿದ್ದರು. ತದನಂತರ, ಬಾಲಕನ ಪೋಷಕರಿಗೆ ಮೊಬೈಲ್ ಕರೆ ಮೂಲಕ ಸಂಪರ್ಕಿಸಿ 25 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಇದಾದ ನಂತರ ಪೋಷಕರು ಹೆಬ್ಬಗೋಡಿ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅಲ್ಲಿಂದ ಪೊಲೀಸರು ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿದರೂ, ದುಷ್ಕರ್ಮಿಗಳ ಕುರಿತು ಮಾಹಿತಿ ಸಿಕ್ಕಿರಲಿಲ್ಲ. ಆದರೆ, ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಶನಿವಾರ ತಡರಾತ್ರಿ ಜಿಗಣಿ ಸಮೀಪದ ನಂಜಾಪುರದ ಶೆಡ್ವೊಂದರಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಈ ಕೃತ್ಯವೆಸಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Next Story