ಅನಾಥ ಮಕ್ಕಳ ಯೋಜನೆ ವಿಸ್ತಾರವಾಗಲಿ
ಮಾನ್ಯರೇ,
ಕೋವಿಡ್ ಸೋಂಕಿನ ವ್ಯಾಪಕತೆ ನಾವ್ಯಾರೂ ಊಹಿಸಿರದಿದ್ದ ದಾರುಣ ಸ್ಥಿತಿಗೆ ನಮ್ಮನ್ನು ದೂಡುತ್ತಿದೆ. ಅದರಲ್ಲೂ ಮಕ್ಕಳ ಬದುಕಂತೂ ಎಲ್ಲ ರೀತಿಯಲ್ಲೂ ಅತಂತ್ರವಾಗಿಹೋಗಿರುವುದು ವಿಷಾದನೀಯ. ಹೀಗಾಗಿ ವಿವಿಧ ಬಗೆಯ ಮಕ್ಕಳ ಸ್ಥಿತಿ ಮತ್ತು ಸಮಸ್ಯೆಯನ್ನು ಹಲವು ಮುಖಗಳಲ್ಲಿ ಅಭ್ಯಸಿಸಿ ಮಗುವಿನ ಬದುಕಿಗೆ ಪೂರಕ ಬೆಂಬಲ ನೀಡುವುದು, ಯೋಜನೆ ರೂಪಿಸುವುದು ಪ್ರಮುಖ ಆದ್ಯತೆಯಾಗಬೇಕಿದೆ. ಈ ಸಂದರ್ಭದಲ್ಲಿ ಅನೇಕ ಮಕ್ಕಳು ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದು ಅತ್ಯಂತ ಸಂಕಟದಾಯಕವಾಗಿದೆ. ಈ ಹೊತ್ತಿನಲ್ಲಿ ರಾಜ್ಯ ಸರಕಾರ ಪೋಷಕರನ್ನು ಕಳೆದುಕೊಂಡ ಮಕ್ಕಳ ಪಾಲನೆ-ಪೋಷಣೆ ಹಾಗೂ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಅಗತ್ಯ ನೆರವು ನೀಡಲು ‘ಬಾಲ ಸೇವಾ ಯೋಜನೆ’ ರೂಪಿಸಲಾಗಿದೆ.
ಯೋಜನೆಯಲ್ಲಿ ಮಗುವಿನ ಪೋಷಣೆಯ ಜವಾಬ್ದಾರಿ ಹೊತ್ತ ಕುಟುಂಬಕ್ಕೆ ಮಕ್ಕಳ ವಿನಿಯೋಗಕ್ಕಾಗಿ ಮಾಸಿಕ ರೂ. 3,500 ಸಹಾಯಧನ ಘೋಷಿಸಲಾಗಿದೆ. 10 ವರ್ಷಗಳ ಒಳಗಿನ ಮಕ್ಕಳ ಆರೈಕೆಗಾಗಿ ಯಾವುದೇ ಕುಟುಂಬ ಮುಂದೆ ಬರದಿದ್ದಲ್ಲಿ, ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಆರೈಕೆ ಮಾಡಲಾಗುವುದಾಗಿ, 10ನೇ ತರಗತಿ ಪೂರೈಸಿದ ಮಕ್ಕಳ ಉನ್ನತ ಶಿಕ್ಷಣ/ಕೌಶಲ್ಯಾಭಿವೃದ್ಧಿಗಾಗಿ ಲ್ಯಾಪ್ಟಾಪ್/ಟ್ಯಾಬ್ ಒದಗಿಸುವುದಾಗಿ ತಿಳಿಸಲಾಗಿದೆ. ಜೊತೆಗೆ 21 ವರ್ಷ ತುಂಬಿದ ಹೆಣ್ಣುಮಕ್ಕಳ ಮದುವೆ/ಉನ್ನತ ಶಿಕ್ಷಣ/ಸ್ವ ಉದ್ಯೋಗ, ಇತರ ಉದ್ದೇಶಗಳಿಗಾಗಿ ರೂ. 1 ಲಕ್ಷ ಸಹಾಯಧನ ಒದಗಿಸುವುದಾಗಿ ಹೇಳಿರುವುದು ಸ್ವಾಗತಾರ್ಹವಾಗಿದೆ. ಆದರೆ ಇಂದಿನ ದುರ್ಭರ ಬದುಕಿನ ಸಂದರ್ಭದಲ್ಲಿ ಅನಾಥ ಮಕ್ಕಳ ಪೋಷಣೆಯ ಜವಾಬ್ದಾರಿ ಹೊರಲು ಮುಂದೆ ಬರುವ ಕುಟುಂಬಕ್ಕೆ ಸರಕಾರದಿಂದ ಮತ್ತಷ್ಟು ಬೆಂಬಲವನ್ನು ನೀಡಬೇಕಿದೆ.
ಬಾಲ ಸೇವಾ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ, ಪ್ರತಿ ಮಗುವಿನ ಪ್ರತಿಯೊಂದು ಚಿಕಿತ್ಸಾ ವೆಚ್ಚವನ್ನು ಭರಿಸುವ ಮತ್ತು ಪ್ರತಿ ಮಗು ಎಲ್ಲಿಯವರೆಗೆ ಓದಲು ಬಯಸುತ್ತದೋ ಅಲ್ಲಿಯವರೆಗೆ ಉಚಿತ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಬೇಕು. ಜೊತೆಗೆ ವಿದ್ಯಾಭ್ಯಾಸ ಪಡೆದ ಆಧಾರದಲ್ಲಿ ಪ್ರತಿ ಮಗುವಿಗೆ ಸರಕಾರಿ ಕೆಲಸವನ್ನು ಖಾತ್ರಿಗೊಳಿಸಬೇಕು ಮತ್ತು ಮುಖ್ಯವಾಗಿ ಸರಕಾರವು ತಕ್ಷಣವೇ ಇಂತಹ ಅನಾಥ ಹೆಣ್ಣುಮಗುವಿನ ಹೆಸರಲ್ಲಿ ರೂ. 5 ಲಕ್ಷ, ಗಂಡುಮಗುವಿನ ಹೆಸರಲ್ಲಿ ರೂ. 3 ಲಕ್ಷ ಬ್ಯಾಂಕ್ ಠೇವಣಿ ಇಟ್ಟು ಅದರ ಬಡ್ಡಿಯನ್ನು ಮಗುವಿನ ಪೋಷಣೆಯ ಜವಾಬ್ದಾರಿ ತೆಗೆದುಕೊಂಡ ಕುಟುಂಬವು, ಮಗುವಿಗೆ 18 ವರ್ಷ ತುಂಬುವವರೆಗೆ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದಾದರೆ ಪ್ರತಿ ಮಗುವಿಗೆ ಉತ್ತಮ ಭವಿಷ್ಯದ ಭರವಸೆ ನೀಡಿದಂತಾಗುತ್ತದೆ.