ಮಹಾರಾಷ್ಟ್ರದ ಮೈತ್ರಿ ಸರಕಾರ ಅವಧಿ ಪೂರ್ಣಗೊಳಿಸುತ್ತದೆ: ಶರದ್ ಪವಾರ್
ಶಿವಸೇನೆ-ಬಿಜೆಪಿ ಮತ್ತೆ ಮೈತ್ರಿ ಕುರಿತ ವದಂತಿಗೆ ತೆರೆ ಎಳೆದ ಎನ್ ಸಿಪಿ ಮುಖ್ಯಸ್ಥ
ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸಲಿದೆ ಎಂದ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮಿತ್ರಪಕ್ಷ ಶಿವಸೇನೆಯನ್ನು ಶ್ಲಾಘಿಸಿದರು. ಈ ಹೇಳಿಕೆಯ ಮೂಲಕ ಶಿವಸೇನೆ-ಬಿಜೆಪಿ ಮತ್ತೆ ಮೈತ್ರಿ ಕುರಿತ ವದಂತಿಗೆ ತೆರೆ ಎಳೆದರು.
ಮಂಗಳವಾರ ದಿಲ್ಲಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಸಭೆ ಹಾಗೂ ಕಳೆದ ವಾರ ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಪವಾರ್ ಭೇಟಿಯಾದ ಹಿನ್ನೆಲೆಯಲ್ಲಿ ಪವಾರ್ ಈ ಹೇಳಿಕೆ ಮಹತ್ವ ಪಡೆದಿದೆ.
ಎನ್ಸಿಪಿಯ 22 ನೇ ಸ್ಥಾಪನಾ ದಿನದಂದು ಮಾತನಾಡಿದ ಪವಾರ್, ಮುಂದಿನ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಎಂವಿಎ (ಶಿವಸೇನೆ, ಎನ್ಸಿಪಿ ,ಕಾಂಗ್ರೆಸ್ ಅನ್ನು ಒಳಗೊಂಡಿರುವ ಮೈತ್ರಿಕೂಟ) ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೂರು ಪಕ್ಷಗಳು ಒಟ್ಟಾಗಿ 2024 ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದರು.
ರಾಜ್ಯ ಸರಕಾರ ಎಷ್ಟು ಕಾಲ ಉಳಿಯುತ್ತದೆ ಎಂಬ ಬಗ್ಗೆ ಅನುಮಾನಗಳು ಮೂಡುತ್ತಿವೆ. ಆದರೆ, ಶಿವಸೇನೆ ನಂಬಲರ್ಹವಾದ ಪಕ್ಷವಾಗಿದೆ. ಸರಕಾರ ವು ತನ್ನ ಪೂರ್ಣ ಅವಧಿಯನ್ನು ಉಳಿಸಿಕೊಳ್ಳುತ್ತದೆ ಹಾಗೂ ಮುಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ" ಎಂದು ಎನ್ಸಿಪಿ ಮುಖ್ಯಸ್ಥರು ಹೇಳಿದರು.