ಮಲ್ಲೇಶ್ವರ ಕ್ಷೇತ್ರದ 3 ಲಸಿಕೆ ಶಿಬಿರಗಳಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ನಿಂದ ಉಚಿತ ಲಸಿಕೆ
ಬೆಂಗಳೂರು, ಜೂ.12: ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ವತಿಯಿಂದ ಮಲ್ಲೇಶ್ವರ ಕ್ಷೇತ್ರದ ಮೂರು ಕಡೆ ನಡೆಯುತ್ತಿರುವ ಕೋವಿಡ್ ಲಸಿಕೆ ಅಭಿಯಾನ ಶಿಬಿರಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಫೌಂಡೇಶನ್ ವತಿಯಿಂದಲೇ ಲಸಿಕೆ ಖರೀದಿ ಮಾಡಿ ಬಿಪಿಎಲ್ ಕುಟುಂಬಗಳು, ಬೀದಿಬದಿ ವ್ಯಾಪಾರಿಗಳು, ಸಾರ್ವಜನಿಕರು, ಮುಂಚೂಣಿ ಕಾರ್ಯಕರ್ತರು ಮತ್ತು ಅಶಕ್ತರಿಗೆ ನೀಡಲಾಗುತ್ತಿದೆ. ಮಲ್ಲೇಶ್ವರದ ಗುಟ್ಟಹಳ್ಳಿಯ ರಂಗ ಮಂದಿರ, ಎಂಎಸ್ಆರ್ ನಗರದ ವಾರ್ಡ್ ಕಚೇರಿ ಸಮೀಪ ಹಾಗೂ ಯಶವಂತಪುರದ ನೇತಾಜಿ ವೃತ್ತದ ಬಳಿಯ ಶ್ರೀನಿವಾಸ ಕಲ್ಯಾಣ ಮಂಟಪದ ಲಸಿಕೆ ಶಿಬಿರಗಳಿಗೆ ಉಪ ಮುಖ್ಯಮಂತ್ರಿ ಭೇಟಿ ನೀಡಿದರು.
ಮೂರು ಕಡೆ ಒಟ್ಟು 1,500 ಲಸಿಕೆಗಳನ್ನು ಸಾರ್ವಜನಿಕರಿಗೆ ನೀಡಲಾಗಿದ್ದು, ಇನ್ನೂ ಲಸಿಕೆ ಅಭಿಯಾನವನ್ನು ಮುಂದವರಿಸಲಾಗುವುದು. ಎಲ್ಲರೂ ತಪ್ಪದೇ ಬಂದು ಲಸಿಕೆ ಪಡೆಯಬೇಕು. ಕೋವಿಡ್ ವಿರುದ್ಧ ನಮಗಿರುವ ಏಕೈಕ ಅಸ್ತ್ರ ಲಸಿಕೆ ಮಾತ್ರ ಎಂದು ಅಶ್ವತ್ಥ ನಾರಾಯಣ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಾ.ವಾಸು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.