ಮಸೀದಿಗಳಿಗೆ ಹಣ: ಕೋವಿಡ್ ಸಂಕಷ್ಟದ ಅವಧಿಯಲ್ಲಿ ಗೊಂದಲ ಮೂಡಿಸುತ್ತಿರುವುದೇಕೆ?: ಯು.ಟಿ.ಖಾದರ್ ಪ್ರಶ್ನೆ
ಬೀದರ್, ಜೂ. 13: `ರಾಜ್ಯ ಸರಕಾರ ಮಸೀದಿಗಳಿಗೆ ನೀಡುವ ಹಣವನ್ನು ಮುಜರಾಯಿ ಇಲಾಖೆ ಮೂಲಕ ನೀಡದೆ ನೇರವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ವರ್ಗಾಯಿಸಿ ಅಲ್ಲಿಂದ ಮಸೀದಿಗಳಿಗೆ ನೀಡಿ ಎಂಬ ಆದೇಶ ಜನರಲ್ಲಿ ಗೊಂದಲ ಹಾಗೂ ಸಂಶಯವನ್ನು ಹುಟ್ಟು ಹಾಕಿದೆ' ಎಂದು ಮಾಜಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರದ ಇಂತಹ ಆದೇಶದಿಂದ ಯಾವುದೇ ಧಾರ್ಮಿಕ ಕೇಂದ್ರಗಳಿಗೆ ನಷ್ಟವೂ ಇಲ್ಲ, ಲಾಭವೂ ಇಲ್ಲ. ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿಯೂ ಮಂದಿರ-ಮಸೀದಿಗಳ ನಿರ್ವಹಣೆಗಾಗಿ ಹಣ ನೀಡುವ ಬದಲು `ಇನಾಮು' ಮೂಲಕ ಜಮೀನು ನೀಡಲಾಗುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮೊದಲಿದ್ದ ಕಾನೂನನ್ನು ರದ್ದು ಪಡಿಸಿ ರಾಜ್ಯ ಸರಕಾರದ ವತಿಯಿಂದಲೇ ಮಂದಿರ-ಮಸೀದಿಗಳ ನಿರ್ವಹಣೆಗಾಗಿ ಹಣವನ್ನು ನೀಡಲಾಗುತ್ತಿತ್ತು ಎಂದು ಹೇಳಿದರು.
ಮೊದಲಿಗೆ ವಾರ್ಷಿಕ 3 ಸಾವಿರ ರೂ.ಗಳಿದ್ದ ಹಣ ನಂತರ ಆರುರಿಂದ 8 ಸಾವಿರ ರೂ.ಗಳಾಯಿತು. ಆ ಮೊತ್ತ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 48 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿತ್ತು. ರಾಜ್ಯದಲ್ಲಿ ಸುಮಾರು 30 ಸಾವಿರ ದೇವಸ್ಥಾನಗಳು, 700 ಮಸೀದಿಗಳು, ಬೌದ್ಧ ಮತ್ತು ಜೈನ ಮಂದಿರಗಳಿಗೆ ಸರಕಾರದ ಖಜಾನೆಯಿಂದಲೇ ನೇರವಾಗಿ ಹಣ ನೀಡಲಾಗುತ್ತಿತ್ತೇ ಹೊರತು ದೇವಸ್ಥಾನಗಳಿಗೆ ಮೀಸಲಾದ ಮೊತ್ತವೋ ಅಥವಾ ಅಲ್ಲಿನ ಹರಕೆ ಹುಂಡಿಯಿಂದ ಬಂದ ಮೊತ್ತದಿಂದಲ್ಲ ಎಂದು ಯು.ಟಿ.ಖಾದರ್ ಸ್ಪಷ್ಟನೆ ನೀಡಿದರು.
'ಇನಾಮು ರದ್ದತಿ ಕಾಯ್ದೆ' ಅನ್ವಯ ಸರಕಾರ ನೇರ ಮುಜರಾಯಿ ಇಲಾಖೆಗೆ ವರ್ಗಾಯಿಸಿ ನಂತರ ಅಲ್ಲಿಂದ ಮಂದಿರ-ಮಸೀದಿಗಳಿಗೆ ಹಣ ಬರುತ್ತಿತ್ತು. ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 42 ಮಸೀದಿಗಳಿಗೆ ಮಾತ್ರ ಹಣ ಬರುತ್ತಿತ್ತು. ಇದೀಗ ರಾಜ್ಯ ಸರಕಾರ ಮಸೀದಿಗಳಿಗೆ ನೀಡುವ ಹಣವನ್ನು ಮುಜರಾಯಿ ಇಲಾಖೆಗೆ ನೀಡದೆ ನೇರವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ವರ್ಗಾಯಿಸಿ ಅಲ್ಲಿಂದ ಮಸೀದಿಗಳಿಗೆ ನೀಡಿ ಎಂದು ಸೂಚಿಸಲಾಗಿದೆ. ಆದರೆ, ಈ ಬಗ್ಗೆ ಒಂದು ವಾರದ ಹಿಂದೆಯೇ ಆದೇಶ ಬಂದಿದ್ದರೂ, ಕೆಲವರ ಮೂಲಕ ಮನವಿ ಪಡೆದು ಜನರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಕೈಹಾಕಿ ಗೊಂದಲ ಮೂಡಿಸುತ್ತಿದ್ದಾರೆಂದು ಯು.ಟಿ.ಖಾದರ್ ದೂರಿದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತು ಅದನ್ನು ತಡೆಗಟ್ಟಲು ಹೇರಿರುವ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರು ಜಾತಿ, ಮತ, ಧರ್ಮವನ್ನು ಮೀರಿ ಒಬ್ಬರಿಗೊಬ್ಬರೂ ಸಹಕಾರ ನೀಡುವ ಮೂಲಕ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇಂತಹ ಕಷ್ಟದ ಅವಧಿಯಲ್ಲಿ ಬಿಜೆಪಿ ಸರಕಾರ ಜನರನ್ನು ವಿಶ್ವಾಸಕ್ಕೆ ಪಡೆದು ತೀರ್ಮಾನಗಳನ್ನು ಕೈಗೊಳ್ಳುವುದನ್ನು ಬಿಟ್ಟು ಸಂಶಯ, ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.