ಕೂಳೂರು ಹಳೆ ಸೇತುವೆಯಲ್ಲಿ ಹೊಂಡ : ವಾಹನ ಚಾಲಕರ ಪರದಾಟ
ಮಂಗಳೂರು, ಜೂ. 14: ಕೂಳೂರು ಹಳೆ ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಚಾಲಕರು ಪರದಾಡುವ ಜತೆಗೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಉದ್ಭವಿಸಿದೆ.
ಮೈಕ್ರೋ ಟೆಕ್ನಾಲಜಿ ಮೂಲಕ 38 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾದ ಕೂಳೂರು ಹಳೇ ಸೇತುವೆಯ ಇಕ್ಕೆಲಗಳಲ್ಲಿ ಇದೀಗ ಹೊಂಡ ಬೀಳಲಾರಂಭಿಸಿದೆ. ಡಾಮರು ತೇಪೆ ಹಾಕಿ ಒಂದೆರಡು ತಿಂಗಳು ಕಳೆಯುವುದರೊಳಗೆ ಒಂದೇ ಮಳೆಗೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಸೋಮವಾರ ಮಳೆಯ ನಡುವೆ ಹೆದ್ದಾರಿ ಇಲಾಖೆ ತೇಪೆ ಹಾಕಲು ಮುಂದಾಗಿದ್ದು ಲಾಕ್ ಡೌನ್ ವಿನಾಯಿತಿ ಸಂದರ್ಭ ನೂರಾರು ವಾಹನಗಳು ಹೆದ್ದಾರಿ ಉದ್ದಕ್ಕೂ ಸಾಲುಗಟ್ಟಿ ನಿಲ್ಲಬೇಕಾಯಿತು. ಮಳೆ ನೀರು ತುಂಬಿ ಘನ ವಾಹನಗಳು ಸೇರಿದಂತೆ ಕಾರು, ದ್ವಿಚಕ್ರ ವಾಹನ ಸವಾರರು ಇಂದು ಬೆಳಗ್ಗೆ ಮಳೆಯ ನಡುವೆ ಪರದಾಡುವಂತಾಗಿದೆ.
ಹಳೇ ಸೇತುವೆಗೆ ಸುಣ್ಣ ಬಣ್ಣ ಮಾಡಿದ್ದರೂ ತಡೆಗೋಡೆ ಹಾಗೆಯೇ ಇರುವ ಕಾರಣ ಸಣ್ಣ ಅಪಘಾತವಾದರೂ ವಾಹನ ನೇರವಾಗಿ ಕೆಳಕ್ಕೆ ಬೀಳುವಂತಿದೆ. ಕೋವಿಡ್ ಕಾರಣದಿಂದ ಸ್ವಲ್ಪ ದಿನಗಳ ಕಾಲ ಹೆದ್ದಾರಿಯಲ್ಲಿ ತೇಪೆ ಕಾರ್ಯ ದುರಸ್ತಿ ನಡೆದಿರಲಿಲ್ಲ. ಇದೀಗ ಸಂಚಾರ ದಟ್ಟಣೆ ಆಗುತ್ತಿರುವುದನ್ನು ಪರಿಗಣಿಸಿ ತಾತ್ಕಾಲಿಕ ಕೆಲಸ ಮಾಡಲಾಗುತ್ತಿದೆ.