ಮಾಹೆಯಿಂದ ಕೋವಿಡ್-19 ಕುರಿತ ಪುಸ್ತಕ ಬಿಡುಗಡೆ
ಮಣಿಪಾಲ, ಜೂ.30: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ನ(ಮಾಹೆ) ಮಣಿಪಾಲ್ ಯೂನಿವರ್ಸಲ್ ಪ್ರೆಸ್ (ಎಂಯುಪಿ) ಕೋವಿಡ್-19 ಸಾಂಕ್ರಾಮಿಕ ಮಹಾಮಾರಿಯನಿಭಾವಣೆ ಹಾಗೂ ನಿಯಂತ್ರಣ ಕುರಿತಂತೆ ಸಂಪಾದಿತ ಕೃತಿಯೊಂದು ಪ್ರಕಟಿಸಿದ್ದು, ಅದನ್ನು ಮಾಹೆಯ ಕುಲಪತಿ ಲೆ.ಜ. ಡಾ. ಎಂ.ಡಿ.ವೆಂಕಟೇಶ್ ಇಂದು ಬಿಡುಗಡೆಗೊಳಿಸಿದರು.
‘ಕೋವಿಡ್-19 ಎ ಮಲ್ಟಿ ಡೆಮೆನ್ಶನಲ್ ರೆಸ್ಪಾನ್ಸ್’ ಕೃತಿಯನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಲೆ.ಜ.ಡಾ.ವೆಂಕಟೇಶ್, ಕೋವಿಡ್-19 ಎರಡನೆಯ ಅಲೆಯನ್ನು ನಿಯಂತ್ರಿಸುವಲ್ಲಿ ಕರ್ನಾಟಕ ಮತ್ತು ದೇಶದಾದ್ಯಂತ ಇರುವ ಮಣಿಪಾಲ ಬಳಗದ ಆಸ್ಪತ್ರೆಗಳು ಗಮನಾರ್ಹ ಸೇವೆ ಸಲ್ಲಿಸಿವೆ. ಸಮಗ್ರವಾದ ಈ ಕೃತಿಯನ್ನು ಪ್ರಕಟಿಸುವ ಮೂಲಕ ದೇಶದ ಆರೋಗ್ಯ ಜಾಗೃತಿ ಕಾರ್ಯಾಚರಣೆಗೆ ಮುಖ್ಯ ಕೊಡುಗೆ ನೀಡುತ್ತಿದೆ ಎಂದರು.
ಕೋವಿಡ್-19ರ ನಿಭಾವಣೆಯ ಕುರಿತ ಮಾಹಿತಿಗಳ ದಾಖಲಾತಿ ಮತ್ತು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೋವಿಡ್ ಯೋಧರಿಗೆ ಮಾಹಿತಿಗಳ ಅಗತ್ಯವಿತ್ತು. ಈಗ ಕೋವಿಡ್-19 ಎ ಮಲ್ಟಿ ಡೆಮೆನ್ಶನಲ್ ರೆಸ್ಪಾನ್ಸ್ ಕೃತಿಯನ್ನು ಪ್ರಕಟಿಸುವ ಮೂಲಕ ಮಾಹೆ ಸಂಸ್ಥೆ ಇದನ್ನು ಒದಗಿಸಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಹೆಯ ಕಾರ್ಯಕಾರಿ ಉಪಾಧ್ಯಕ್ಷ ಡಾ.ಎಚ್. ವಿನೋದ್ ಭಟ್ ಮಾತನಾಡಿ, ಕೋವಿಡ್-19ರ ಸಂದರ್ಭದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಕಾಳಜಿ ವಿಭಾಗಗಳು ಹೊಸ ಸವಾಲನ್ನು ಎದುರಿಸಿವೆ. ಹೊಸ ಸಂಶೋಧನೆಗಳನ್ನು ಮಾಡುವ ಮೂಲಕ ಅರಿವಿನ ಪರಿಧಿಯನ್ನು ವಿಸ್ತರಿಸಲು ಕೋವಿಡ್-19 ಅವಕಾಶ ಮಾಡಿಕೊಟ್ಟಿದೆ. ಕೇವಲ ವೈಜ್ಞಾನಿಕವಾಗಿ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನೆಲೆಯ ಆಯಾಮಗಳಲ್ಲಿಯೂ ಈ ಸಂದರ್ಭದ ಸಂದಿಗ್ಧತೆಯನ್ನು ಪರಿಗಣಿಸಬೇಕಾಗಿದೆ ಎಂದು ಹೇಳಿದರು.
ಮಣಿಪಾಲ ಬಳಗದ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಪ್ರಾದ್ಯಾಪಕ ಹಾಗೂ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ಮತ್ತು ನಿಯಂತ್ರಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಶಶಿಕಿರಣ್ ಉಮಾಕಾಂತ್ ವಿಶೇಷ ಉಪನ್ಯಾಸ ನೀಡಿದರು.
ಪುಸ್ತಕದ ಸಂಪಾದಕರಾದ ಡಾ.ರವಿರಾಜ್ ಎನ್.ಸೀತಾರಾಮ್, ಡಾ. ಎನ್ ಉಡುಪ ಮತ್ತು ಡಾ. ಚಿರಂಜಯ್ ಮುಖೋಪಾಧ್ಯಾಯ ಉಪಸ್ಥಿತರಿದ್ದರು.
ಮಣಿಪಾಲ ಯೂನಿವರ್ಸಲ್ ಪ್ರೆಸ್ನ ಮುಖ್ಯ ಸಂಪಾದಕಿ ಡಾ.ನೀತಾ ಇನಾಂದಾರ್ ಅವರು ದಶಮಾನೋತ್ಸ ಆಚರಿಸುತ್ತಿರುವ ಸಂಸ್ಥೆಯ ಬಗ್ಗೆ ವಿವರಗಳನ್ನು ನೀಡಿ, ಶೀಘ್ರವೇ ಈ ಕೃತಿಯ ಇ-ಬುಕ್ನ್ನು ಬಿಡುಗಡೆಗೊಳಿಸಿ ವಿಶ್ವ ದಾದ್ಯಂತ ಇದನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.