ರಾಜಾ ಕಾಲುವೆಯ ಅಸಮರ್ಪಕ ನಿರ್ವಹಣೆ, ನಿರ್ಲಕ್ಷ್ಯತೆ ದುರದೃಷ್ಟಕರ: ವೆಲ್ಫೇರ್ ಪಾರ್ಟಿ ಆರೋಪ
ಮಂಗಳೂರು, ಜೂ. 5: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಾ ಕಾಲುವೆ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಕಳೆದ ಮೇ ತಿಂಗಳಲ್ಲಿ ಮುಗಿಸಿದ ನಂತರ ಅದಾಗಲೇ ಮಳೆಗಾಲ ಆರಂಭಗೊಂಡ ನೆಲೆಯಲ್ಲಿ ಅಲ್ಲಿನ ಚರಂಡಿ ಯಲ್ಲಿನ ಮಣ್ಣನ್ನು ಹೊರ ಹಾಕಿದ್ದರೂ ಇನ್ನೂ ಅಲ್ಲಿಂದ, ಅದನ್ನು ಸ್ಥಳಾಂತರಗೊಳಿಸದಿರುವುದು ಸಾರ್ವಜನಿಕರಿಗೆ ಬಹಳ ಉಪದ್ರವಕಾರಿಯಾಗಿ ಪರಿಣಮಿಸಿದೆ. ಅತೀ ಹೆಚ್ಚಿನ ನಗರ ನಿವಾಸಿಗಳ ವಸತಿಗಳನ್ನು ಮತ್ತು ವಾಣಿಜ್ಯ ಸಂಕೀರ್ಣಗಳನ್ನೂ ಹೊಂದಿರುವ ಪಾಂಡೇಶ್ವರದ ಸೌಹಾರ್ದ ರಸ್ತೆಗೆ ಅಡ್ಡ ರಸ್ತೆಯಾಗಿರುವ ಇದರ ಅವ್ಯವಸ್ಥೆಯಿಂದಾಗಿ, ಇಲ್ಲಿನ ಪಾರ್ಕಿಂಗ್ ಸೌಲಭ್ಯ ಕೂಡಾ ಇಲ್ಲದಂತಾಗಿದೆ.
ಒಟ್ಟಿನಲ್ಲಿ ರಾಜಾ ಕಾಲುವೆಯ ದುರಸ್ತಿಯಲ್ಲಿ ಇನ್ನೂ ಬಾಕಿ ಉಳಿದಿರುವ ದುರವಸ್ಥೆ ಮುಗಿಯದ ಕಥೆಯಾಗಿ ಮುಂದುವರಿಯುತ್ತಿ ರುವುದು ತೀರಾ ದುರದೃಷ್ಟಕರವೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದು ಮನಪಾದ ನಿಕಟಪೂರ್ವ ಮೇಯರ್ ದಿವಾಕರ್ ಪಾಂಡೇಶ್ವರವರು ಪ್ರತಿನಿಧಿಸುವ ಕ್ಷೇತ್ರವೆಂಬುವುದು ಗಮನಾರ್ಹ ವಾಗಿದ್ದು, ಅವರ ಆಸಕ್ತಿಯಿಂದಲೇ ಇಲ್ಲಿನ ತಡೆಗೋಡೆ ನಿರ್ಮಾಣ ಪೂರ್ತಿಯಾಗಿದ್ದು ಇದರಲ್ಲಿ ಇನ್ನುಳಿದಿರುವ ಸಮಸ್ಯೆಗಳನ್ನು ಕೂಡಾ ಅವರೇ ಮುತುವರ್ಜಿವಹಿಸಿ ಶೀಘ್ರ ಪರಿಹರಿಸಲು ಮುಂದಾಗಬೇಕಿದೆಯೆಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.