ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆರ್ಥಿಕ ಬಿಕ್ಕಟ್ಟು
ಏಕಗವಾಕ್ಷಿ ಯೋಜನೆ ಜಾರಿಗೆ ಬಿಲ್ಡರ್ಗಳ ಒತ್ತಾಯ
► ತೈಲಬೆಲೆ ಏರಿಕೆಯಿಂದ ಕಚ್ಚಾ ವಸ್ತು ದರ ಗಗನಕ್ಕೆ
► ಫ್ಲ್ಯಾಟ್, ಅಪಾರ್ಟ್ಮೆಂಟ್ ಬೆಲೆ ಏರಿಕೆ
ಮಂಗಳೂರು, ಜು.6: ಕೊರೋನ ಇಡೀ ದೇಶದ ಆರ್ಥಿಕತೆಗೆ ಹೊಡೆತ ಕೊಟ್ಟಿದೆ. ಇದರಿಂದ ಸಹಜವಾಗಿಯೇ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೂಡ ಪೆಟ್ಟುಬಿದ್ದಿದೆ. ರಿಯಲ್ ಎಸ್ಟೇಟ್ ಉದ್ಯಮ ಅಕ್ಷರಶಃ ಸ್ತಬ್ಧವಾಗಿದ್ದು, ಉದ್ಯಮದಲ್ಲಿ ಕೋಟ್ಯಂತರ ರೂ. ನಷ್ಟ ಉಂಟಾಗಿ, ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.
ಈ ವರ್ಷ ಕೊರೋನದ ಎರಡನೇ ಅಲೆ ಸುಮಾರು ಎರಡು ತಿಂಗಳವರೆಗೆ ಎಲ್ಲ ಕ್ಷೇತ್ರಗಳನ್ನು ಇನ್ನಿಲ್ಲದಂತೆ ಕಾಡಿದ್ದು, ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ಹಾಗೂ ಕಟ್ಟಡ ನಿರ್ಮಾಣ ಕಚ್ಚಾ ವಸ್ತು ದರ ಏರಿಕೆಯಿಂದ ರಿಯಲ್ ಎಸ್ಟೇಟ್ ಉದ್ಯಮ ತತ್ತರಿಸಿದೆ. ಅರ್ಥ ವ್ಯವಸ್ಥೆಯ ಸುಧಾರಣೆಗೆ ಸರಕಾರ ಕ್ರಮ ಕೈಗೊಂಡರೆ ಮಾತ್ರ ಉದ್ಯಮ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಸಾಧ್ಯ ಎನ್ನುವಂತಿದೆ.
ಕೊರೋನ ಸೋಂಕಿನ ಪರಿಣಾಮದಿಂದ ಉದ್ಯಮಕ್ಕೆ ಎಷ್ಟು ನಷ್ಟವಾಗಿದೆ ಎಂದು ನಿಖರವಾಗಿ ಅಂದಾಜಿಸುವುದು ಸದ್ಯಕ್ಕೆ ಕಷ್ಟ. ಆರ್ಥಿಕ ಹಿಂಜರಿತದ ಪರಿಣಾಮ ಆರು ತಿಂಗಳುಗಳಿಂದ ಉದ್ಯಮ ತೆವಳುತ್ತಾ ಸಾಗಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಹೊಡೆತಗಳ ನಂತರ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡು ಉದ್ಯಮ ಸಾಗುತ್ತಿತ್ತಾದರೂ, ಈಗ ಬಿದ್ದಿರುವ ಹೊಡೆತದಿಂದ ಹೊರಬರಲು ಕನಿಷ್ಠ ಆರು ತಿಂಗಳುಗಳಿಂದ ವರ್ಷವಾದರೂ ಅಚ್ಚರಿಪಡಬೇಕಾಗಿಲ್ಲ ಎನ್ನುವುದು ರಿಯಲ್ ಎಸ್ಟೇಟ್ ಉದ್ಯಮದ ಬಹುತೇಕರ ಅನಿಸಿಕೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾರ್ಚ್ ನಂತರ ನಿವೇಶನಗಳ ಖರೀದಿ, ಮಾರಾಟ ತೀರಾ ಇಳಿಮುಖಗೊಂಡಿದೆ. ಮೊದಲಿಗೆ ರಿಯಲ್ ಎಸ್ಟೇಟ್ ಕ್ಷೇತ್ರವೂ ಆರಕ್ಕೇರದ ಮೂರಕ್ಕಿಳಿಯದ ಪರಿಸ್ಥಿತಿಯಲ್ಲಿತ್ತು. ಕೋವಿಡ್ ನಂತರ ಈ ಕ್ಷೇತ್ರದಲ್ಲಿಯೂ ಜನರು ಬಂಡವಾಳ ಹೂಡುವುದನ್ನು ಕಡಿಮೆ ಮಾಡಿದ್ದಾರೆ. ಕೊಳ್ಳುವವರ ಸಂಖ್ಯೆಗಿಂತ ಮಾರುವವರ ಸಂಖ್ಯೆ ಹೆಚ್ಚಾಗಿದೆ ಎಂಬುದು ರಿಯಲ್ ಎಸ್ಟೇಟ್ ನಡೆಸುವವರ ಮಾತಾಗಿದೆ.
ನಿರ್ಮಾಣ ವೆಚ್ಚ ಹೆಚ್ಚಳ: ‘ಲಾಕ್ಡೌನ್ ಅವಧಿಯಲ್ಲೇ ಹೆಚ್ಚು ಪ್ರಮಾಣದಲ್ಲಿ ಪೆಟ್ರೋಲಿಯಂ ದರ ಏರಿಕೆಯಿಂದಾಗಿ ಸಿಮೆಂಟ್, ಕಬ್ಬಿಣ, ಸ್ಟೀಲ್, ಪೈಪ್ಗಳು, ಶೀಟ್ಗಳು ಮತ್ತಿತರ ಕಟ್ಟಡ ನಿರ್ಮಾಣದ ಅಗತ್ಯ ವಸ್ತುಗಳ ದರವೂ ಭಾರೀ ಏರಿಕೆಯಾಗಿದೆ. ಸರಕಾರದ ತೆರಿಗೆ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ಕ್ವೇರ್ ಫೀಟ್ಗೆ 500 ರೂ. ಹೆಚ್ಚಳ, ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲೂ 10 ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಇದರಿಂದ ಸಹಜವಾಗಿಯೇ ನಿರ್ಮಾಣ ವೆಚ್ಚ ಅಧಿಕವಾಗಲಿದೆ’ ಎನ್ನುತ್ತಾರೆ ಮರಿಯನ್ ಪ್ರಾಜೆಕ್ಟ್ನ ಆಡಳಿತ ನಿರ್ದೇಶಕ ನವೀನ್ ಕಾರ್ಡೊಝ.
ಕಚ್ಚಾ ವಸ್ತುಗಳ ದರದಲ್ಲಿ ಶೇ.5ರಷ್ಟು ಏರಿಳಿಕೆ ಇದ್ದಲ್ಲಿ ಸಮಸ್ಯೆ ಬರುವುದಿಲ್ಲ. ಆದರೆ, ಒಂದೇ ವರ್ಷದಲ್ಲಿ ಸ್ಟೀಲ್ ಬೆಲೆಯು ಕೆ.ಜಿ.ಯೊಂದಕ್ಕೆ 40 ರೂ.ನಿಂದ 70 ರೂ.ಗೆ ಜಿಗಿತ ಕಂಡಿದೆ. ಪಿವಿಸಿ ಪೈಪ್ ಬೆಲೆಯಲ್ಲೂ ದುಪ್ಪಟ್ಟು ಹೆಚ್ಚಳವಾಗಿದೆ. 300 ರೂ. ಇದ್ದ ಸಿಮೆಂಟ್ ದರ 400ರ ಆಸುಪಾಸಿಗೆ ಬಂದು ನಿಂತಿದೆ. ಸಿಮೆಂಟ್ ದರದಲ್ಲಿ ಶೇ.25ರಷ್ಟು ಭಾರೀ ಏರಿಕೆಯಾಗಿರುವುದು ಕಟ್ಟಡ ನಿರ್ಮಾಣದಾರರಲ್ಲಿ ಆತಂಕ ಹೆಚ್ಚಿಸಿದೆ. ಜೊತೆಗೆ, ಹೊಸ ಫ್ಲಾಟ್ಗಳ ನಿರ್ಮಾಣ ಯೋಜನೆಗಳು ದುಬಾರಿಯಾಗುವ ಸಾಧ್ಯತೆ ಇದೆ. ದರ ಏರಿಕೆಯಿಂದಾಗಿ ಜಿಎಸ್ಟಿಯಲ್ಲೂ ಹೆಚ್ಚಳವಾಗಲಿದೆ. ಭೂಮಿಯ ದರವೂ ಗಗನಕ್ಕೇರಿದೆ. ಪ್ರತಿ ಚದರ್ ಅಡಿಗೆ 400-500 ರೂ.ಗಳಷ್ಟು ಏರಿಕೆಯಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಲಿದೆ ಎನ್ನುತ್ತಾರೆ ಅವರು.
ಏಕಗವಾಕ್ಷಿ ಯೋಜನೆ ಜಾರಿಗೆ ಒತ್ತಾಯ: ರಿಯಲ್ ಎಸ್ಟೇಟ್ ಉದ್ಯಮಿಗಳು ಅಪಾರ್ಟ್ ಮೆಂಟ್ವೊಂದನ್ನು ನಿರ್ಮಿಸಲು ಸುಮಾರು 17ಕ್ಕಿಂತ ಹೆಚ್ಚು ಇಲಾಖೆಗಳ ಅನುಮತಿ ಪಡೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ರಾಜ್ಯ ಸರಕಾರ ಏಕಗವಾಕ್ಷಿ ಯೋಜನೆಯನ್ನು 2016ರಲ್ಲೇ ಜಾರಿಗೆ ತಂದಿದೆ. ಆದರೆ ಇಲ್ಲಿಯವರೆಗೂ ಅದು ಜಾರಿಯಾಗಿಲ್ಲ. ಕೂಡಲೇ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಬಿಲ್ಡರ್ಗಳಿಗೆ ಕಟ್ಟಡ ನಿರ್ಮಾಣ ಕೆಲಸ ಸಲೀಸಾಗುತ್ತದೆ ಎನ್ನುವುದು ಬಿಲ್ಡರ್ಗಳ ಅಭಿಮತ.
250 ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟ ಭೀತಿ!
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆರ್ಥಿಕ ಹಿನ್ನಡೆಯಾದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಉಲ್ಬಣಗೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮವನ್ನು ಕೇಂದ್ರೀಕರಿಸಿಕೊಂಡು ಸುಮಾರು 250ಕ್ಕೂ ಹೆಚ್ಚು ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಕಬ್ಬಿಣ, ಸ್ಟೀಲ್, ಸಿಮೆಂಟ್, ಟೈಲ್ಸ್, ಇಲೆಕ್ಟ್ರಾನಿಕ್ಸ್ ಉಪಕರಣ, ಪ್ಲೈವುಡ್, ಪೈಪ್ಗಳು ಮತ್ತಿತರ ನೂರಾರು ಬಗೆಯ ಕಚ್ಚಾ ವಸ್ತುಗಳನ್ನು ಕೈಗಾರಿಕೆಗಳಲ್ಲಿ ಉತ್ಪಾದಿಸಲಾಗುತ್ತದೆ. ಪ್ರತಿ ಕೈಗಾರಿಕೆಗಳಲ್ಲೂ ಸಾವಿರಾರು ಜನರು ದುಡಿಯುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆರ್ಥಿಕ ಸಮಸ್ಯೆ ತಲೆದೋರಿದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು.
ಹಣದ ಹರಿವು ಕುಸಿತ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೈಟುಗಳ ವ್ಯವಹಾರ ಅರ್ಧಕ್ಕಿಂತ ಕಡಿಮೆ ಆಗಿದೆ. ಲಾಕ್ಡೌನ್ ನಂತರ ಹಲವು ವ್ಯವಹಾರ ಚಟುವಟಿಕೆಗಳಿಗೂ ಪೆಟ್ಟು ಬಿದ್ದಿದ್ದರಿಂದ ಹಣದ ಹರಿವು ಕುಸಿದಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಭೂಮಿ ಖರೀದಿಗೆ ಜನ ಆಸಕ್ತಿ ತೋರುತ್ತಿಲ್ಲ. ಅಲ್ಲದೆ, ಗಲ್ಫ್ ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟ ಏರ್ಪಟ್ಟಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುತ್ತಿದ್ದ ಅನಿವಾಸಿ ಭಾರತೀಯರು ಕೂಡ ಹಣ ವಿನಿಯೋಗಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹಣದ ಹರಿವಿನಲ್ಲೂ ಭಾರೀ ಕುಸಿತ ಕಂಡುಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆಯಾಗಬೇಕಾದರೆ ಸರಕಾರ ಬೆಂಬಲ ನೀಡಬೇಕು. ಕಚ್ಚಾವಸ್ತು ದರ ಇಳಿಕೆ ಮಾಡಬೇಕು. ಕರಾವಳಿಗೆ ಜನರನ್ನು ಆಕರ್ಷಿಸಲು ಹೆಚ್ಚಿನ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು.
ನವೀನ್ ಕಾರ್ಡೊಝ, ಮರಿಯನ್ ಪ್ರಾಜೆಕ್ಟ್ನ ಆಡಳಿತ ನಿರ್ದೇಶಕ
ಕಟ್ಟಡ ನಿರ್ಮಾಣದ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಫ್ಲಾಟ್ಗಳ ದರದಲ್ಲೂ ಹೆಚ್ಚಳ ಕಂಡುಬರಲಿದೆ. ಉತ್ಕೃಷ್ಟ ಗುಣಮಟ್ಟದ ಕಚ್ಚಾವಸ್ತು ಬಳಕೆ ಮಾಡಿದಲ್ಲಿ ಮಾತ್ರ ಉತ್ತಮ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯ. ಇದರಿಂದ ಸಹಜವಾಗಿಯೇ ಫ್ಲಾಟ್, ಅಪಾರ್ಟ್ ಮೆಂಟ್ಗಳ ದರದಲ್ಲೂ ಏರಿಕೆಯಾಗಲಿದೆ.
ಪುಷ್ಪರಾಜ್ ಜೈನ್, ಕ್ರೆಡೈ ಮಂಗಳೂರು ಅಧ್ಯಕ್ಷ, ಅಭಿಷ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ನ ಆಡಳಿತ ನಿರ್ದೇಶಕ