ನಕ್ಸಲರಿಗೆ ವಿಠಲ ಮಲೆಕುಡಿಯ ನೆರವು ನೀಡಿದ ಆರೋಪ: ಸತತ ನಾಲ್ಕನೇ ಬಾರಿ ಗೈರು ಹಾಜರಾದ ಪೊಲೀಸ್ ಅಧಿಕಾರಿಗಳು
ಜು.27ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
ಮಂಗಳೂರು, ಜು.6: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ಅವರ ವಿರುದ್ಧ ನಕ್ಸಲರಿಗೆ ನೆರವಾದ ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆಗೆ ಹಾಜರಾಗಬೇಕಿದ್ದ ಅಂದಿನ ಪುತ್ತೂರು ಎಎಸ್ಪಿಎಂ.ಎನ್. ಅನುಚೇತನ್ ಮತ್ತು ಅಂದಿನ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಭಾಸ್ಕರ ರೈ ಸಹಿತ ಮೂವರು ಮತ್ತೆ ಗೈರು ಹಾಜರಾಗಿದ್ದಾರೆ. ಹಾಗಾಗಿ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜು.27ಕ್ಕೆ ಮುಂದೂಡಿದ್ದಾರೆ.
2021ರ ಮಾ.1ರಂದು ಬೆಳ್ತಂಗಡಿ ಎಸ್ಸೈ ಆಗಿದ್ದ ಉಮೇಶ್ ಉಪ್ಪಳಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ್ದರು. ಆದರೆ ಅನುಚೇತನ್ ಮತ್ತು ಭಾಸ್ಕರ ರೈ ಗೈರು ಹಾಜರಾದ ಕಾರಣ ಮಾ.23ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆವತ್ತೂ ಈ ಅಧಿಕಾರಿಗಳು ಗೈರಾಗಿದ್ದರು. ಬಳಿಕ ಎ.12ರಂದು ಹಾಜರಾಗಲು ನ್ಯಾಯಾಲಯ ಸೂಚಿಸಿತ್ತು. ಆವಾಗಲೂ ಅಧಿಕಾರಿಗಳು ಗೈರಾಗಿದ್ದರು. ಬಳಿಕ ಮೇ 5ಕ್ಕೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಕೋವಿಡ್-19 ಹಿನ್ನಲೆಯಲ್ಲಿ ಲಾಕ್ಡೌನ್ ಹೇರಿದ ಕಾರಣ ನ್ಯಾಯಾಲಯದ ಕಲಾಪ ನಡೆದಿರಲಿಲ್ಲ. ಹಾಗೇ ಮಂಗಳವಾರ (ಜು.6) ವಿಚಾರಣೆಗೆ ಹಾಜರಾಗಲು ತಿಳಿಸಲಾಗಿತ್ತು. ಆದರೆ ಮಂಗಳವಾರವೂ ಯಾರೂ ಹಾಜರಾಗದ ಕಾರಣ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ನಕ್ಸಲರಿಗೆ ನೆರವಾಗಿದ್ದಾರೆ ಎಂದು ಆರೋಪ ಹೊರಿಸಿ 2012ರ ಮಾರ್ಚ್ 3ರಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 45 ಸಾಕ್ಷಿಗಳ ವಿಚಾರಣೆ ನಡೆದಿದೆ ಎಂದು ನ್ಯಾಯವಾದಿ ದಿನೇಶ್ ಉಳೇಪ್ಪಾಡಿ ತಿಳಿಸಿದ್ದಾರೆ.