ಸಹಕಾರ ಸಚಿವಾಲಯದಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ: ಮಂಜುನಾಥ್ ಎಸ್.ಕೆ.
ಉಡುಪಿ, ಜು.8: ಕೇಂದ್ರ ಸರಕಾರ ನೂತನವಾಗಿ ರಚಿಸಿದ ಸಹಕಾರ ಸಚಿವಾಲಯದಿಂದ ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಉತ್ತೇಜನ ದೊರೆಯ ಲಿದ್ದು, ಸಹಕಾರಿ ರಂಗ ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್.ಕೆ. ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿದ್ದು, 30 ಕೋಟಿಗೂ ಅಧಿಕ ಸದಸ್ಯರಿ ದ್ದಾರೆ. 6.30ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ. ಈ ಕ್ಷೇತ್ರ ಇಷ್ಟೊಂದು ಬೃಹತ್ತಾಗಿ ಬೆಳೆದಿದ್ದರೂ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ಇರಲಿಲ್ಲ. ಈ ನಿಟ್ಟಿನಲ್ಲಿ ಸಹಕಾರ ಭಾರತಿ ಮತ್ತು ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆ ಅನೇಕ ಬಾರಿ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದು, ಸರಕಾರ ಮನವಿಗೆ ಸ್ಪಂದಿಸಿದೆ ಎಂದರು.
ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ವ್ಯಕ್ತಿಗಳು ಅಧಿಕಾರ ಪಡೆಯುವುದನ್ನು ಆರ್ಬಿಐ ಇತ್ತೀಚೆಗೆ ನಿಷೇಧಿಸಿದ್ದು, 1550 ಕೋಆಪರೇಟಿವ್ ಬ್ಯಾಂಕ್ಗಳನ್ನು ಹತೋಟಿಯಲ್ಲಿಟ್ಟುಕೊಂಡಿದೆ. ಕ್ರೆಡಿಟ್ ಸೊಸೈಟಿಗಳು ನಬಾರ್ಡ್ ವ್ಯಾಪ್ತಿಗೆ ಬರಲಿವೆ. ಸಚಿವಾಲಯದಿಂದ ಜಿಎಸ್ಟಿ ಸಮಸ್ಯೆ ಶೀಘ್ರ ನಿವಾರಣೆಯಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಜಿಲ್ಲಾಧ್ಯಕ್ಷ ಭಾಸ್ಕರ ಕಾಮತ್, ಅಭಿವೃದ್ಧಿ ಅಧಿಕಾರಿ ವಿಜಯ ಡಿ.ಎಸ್., ಸಹಕಾರ ಭಾರತಿ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.