ಕಾಸರಗೋಡಿನ ನೂತನ ಜಿಲ್ಲಾಧಿಕಾರಿಯಾಗಿ ಭಂದಾರಿ ಸ್ವಾಗತ್ ಚಂದ್ ಅಧಿಕಾರ ಸ್ವೀಕಾರ
ಜಿಲ್ಲೆಯ ಪ್ರಥಮ ಮಹಿಳಾ ಡಿಸಿ
ಕಾಸರಗೋಡು. ಜು.13: ಕಾಸರಗೋಡಿನ ನೂತನ ಜಿಲ್ಲಾಧಿಕಾರಿಯಾಗಿ ಭಂದಾರಿ ಸ್ವಾಗತ್ ಚಂದ್ ರಣ್ವೀರ್ ಚಂದ್ ಇಂದು ಬೆಳಗ್ಗೆ ಅಧಿಕಾರ ಸ್ವೀಕರಿಸಿದರು.
ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿರುವ ಭಂದಾರಿ ಸ್ವಾಗತ್ ರಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿರ್ಗಮನ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೂಗುಚ್ಛ ನೀಡಿ ಬರಮಾಡಿಕೊಂಡರು. ಬಳಿಕ ಕಡತಗಳನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಾಮಚಂದ್ರನ್, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಕಾಸರಗೋಡು ಕಂದಾಯಾಧಿಕಾರಿ ಅತುಲ್ ಸ್ವಾಮಿನಾಥನ್ ಮೊದಲಾದವರು ಉಪಸ್ಥಿತರಿದ್ದರು.
ಭಂದಾರಿ ಸ್ವಾಗತ್ ಕಾಸರಗೋಡು ಜಿಲ್ಲೆಯ 24ನೇ ಜಿಲ್ಲಾಧಿಕಾರಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಭಂದಾರಿ ಸ್ವಾಗತ್ ಅವರು ವಾಣಿಜ್ಯ ಇಲಾಖಾ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರಮುಖ ಆದ್ಯತೆ ನೀಡುವುದಾಗಿ ಹೇಳಿದರು.