ಕಾಸರಗೋಡು: ಬಿಜೆಪಿಯಿಂದ ಎಸ್ಪಿ ಕಚೇರಿಗೆ ಪ್ರತಿಭಟನಾ ಜಾಥಾ
ಕಾಸರಗೋಡು, ಜು.14: ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಬಿಜೆಪಿ ನಾಯಕರ ಮೇಲೆ ಸುಳ್ಳು ಮೊಕದ್ದಮೆ ಗಳನ್ನು ಹೂಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬುಧವಾರ ಪ್ರತಿಭಟನಾ ಜಾಥಾ ನಡೆಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ಮಾತನಾಡಿ, ಸಿಪಿಎಂ ಪಕ್ಷದ ನಾಯಕರ ನಿರ್ದೇಶನದಂತೆ ಬಿಜೆಪಿ ನಾಯಕರ ವಿರುದ್ಧ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ಮಂಜೇಶ್ವರದ ಬಿಎಸ್ಪಿ ಅಭ್ಯರ್ಥಿಗೆ ಬಿಜೆಪಿ ನಾಯಕರು ಹಣ ನೀಡಿಲ್ಲ, ಬೆದರಿಕೆ ಹಾಕಿಲ್ಲ. ಹಣ ಪಡೆದುಕೊಂಡಿರುವುದಾಗಿ ಹೇಳಿಕೆ ನೀಡಿದ್ದೆನೆ ಎಂದು ಹೇಳಿರುವ ಕೆ.ಸುಂದರರ ವಿರುದ್ಧ ಯಾವುದೇ ಕೇಸು ದಾಖಲಿಸಿಲ್ಲ. ಸುಳ್ಳು ಹೇಳಿಕೆಗಳನ್ನು ಆಧರಿಸಿ ಬಿಜೆಪಿ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗುತ್ತಿದೆ ಎಂದು ಆರೋಪಿಸಿದರು.
ವಿನಾಃ ಕಾರಣ ಬಿಜೆಪಿ ಮುಖಂಡರ ವಿರುದ್ಧ ಕೇಸು ದಾಖಲಿಸಿ ಕಿರುಕುಳ ನೀಡಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಶ್ರೀಕಾಂತ್ ಎಚ್ಚರಿಸಿದ್ದಾರೆ.
ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೂಪವಾಣಿ ಆರ್. ಭಟ್, ನವೀನ್ ರಾಜ್, ಎ.ವೇಲಾಯುಧನ್, ಸುಧಾಮ ಗೋಸಾಡ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.