ಗಾಳಿ-ಮಳೆಗೆ ಅಂಪಾರು, ಇಡೂರು ಗ್ರಾಮಗಳಲ್ಲಿ ಅಡಿಕೆ ತೋಟಕ್ಕೆ ಹಾನಿ
ಉಡುಪಿ, ಜು.16: ಕುಂದಾಪುರ ತಾಲೂಕಿನಲ್ಲಿ ಗುರುವಾರ ಬೀಸಿದ ಗಾಳಿ- ಮಳೆಗೆ ಅಂಪಾರು ಹಾಗೂ ಇಡೂರು ಗ್ರಾಮಗಳಲ್ಲಿ ಅಡಿಕೆ ತೋಟ ಗಳಿಗೆ ಅಪಾರ ಹಾನಿ ಸಂಭವಿಸಿದೆ. ಅಲ್ಲದೇ ಜಿಲ್ಲೆಯಾದ್ಯಂತ ದಿನದಲ್ಲಿ 20ಕ್ಕೂ ಅಧಿಕ ಮನೆಗಳಿಗೆ ಭಾಗಶ: ಹಾನಿಯಾಗಿರುವ ವರದಿಗಳು ಇಲ್ಲಿಗೆ ಬಂದಿವೆ.
ಬಸ್ರೂರು ಸಮೀಪದ ಅಂಪಾರು ಗ್ರಾಮದ ಗಿರಿಜಮ್ಮ ಶೆಡ್ತಿ ಎಂಬವರಿಗೆ ಸೇರಿದ ತೋಟದ ಅಡಿಕೆ ಮರಗಳು ಧರಾಶಾಹಿಯಾಗಿವೆ. ಇದರಿಂದ 40,000 ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಇಡೂರು ಗ್ರಾಮದ ಸುಲೋಚನಾ ಶೆಡ್ಡಿ ಅವರ ಮನೆಯ ತೋಟದ ಅಡಿಕೆ ಮರಗಳು ಗಾಳಿಯ ಹೊಡೆತಕ್ಕೆ ಮುರಿದು ಬಿದ್ದಿದ್ದು ಸುಮಾರು 20ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಬಸ್ರೂರು ಗ್ರಾಮದ ಅಕ್ಕಯ್ಯ ಪೂಜಾರ್ತಿ ಅವರ ಪಕ್ಕಾ ಮನೆ ಹಾಗೂ ಅಂಪಾರು ಗ್ರಾಮದ ಬಾಡು ಮಡಿವಾಳರ ವಾಸ್ತವ್ಯದ ಪಕ್ಕಾ ಮನೆ ಮಳೆಯಿಂದ ಭಾಗಶ: ಹಾನಿಗೊಂಡಿದ್ದು ತಲಾ 25,000ರೂ.ನಷ್ಟ ಉಂಟಾಗಿದೆ. ತ್ರಾಸಿ ಗ್ರಾಮದ ರಿಚರ್ಡ್ ಮನೆಯ ಜಾನುವಾರು ಕೊಟ್ಟಿಗೆ ಗಾಳಿಯಿಂದ ಭಾಗಶ: ಹಾನಿಯಾಗಿ 35,000ರೂ. ಕುಳಂಜೆ ಗ್ರಾಮದ ಶೇಖರ ಮೊಗವೀರರ ಜಾನುವಾರು ಕೊಟ್ಟಿಗೆಗೆ 20ಸಾವಿರ ಹಾಗೂ ಬೆಳ್ಳಾಲ ಗ್ರಾಮದ ಗಿರಿಜ ಪೂಜಾರ್ತಿ ಮನೆಯ ಜಾನುವಾರು ಕೊಟ್ಟಿಗೆಗೆ 30ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕಿನ ಹೆರಂಜಾಲು ಗ್ರಾಮದ ಸವಿತಾ ಎಂಬವರ ಜಾನುವಾರ ಕೊಟ್ಟಿಗೆಗೆ 20,000, ಉಪ್ಪುಂದ ಗ್ರಾಮದ ಗೋವಿಂದ ಖಾರ್ವಿ ಇವರ ಮನೆ ಮೇಲೆ ಮರಬಿದ್ದು 40ಸಾವಿರ ರೂ.ನಷ್ಟವಾಗಿದೆ. ಉಡುಪಿ ತಾಲೂಕು ಉದ್ಯಾವರ ಗ್ರಾಮದ ಸಂಜೀವ ಹಾಗೂ ಎಂ.ಕೆ.ಶಾಂತರಾಜ ಕೋಟ್ಯಾನ್ ಎಂಬವರ ಮನೆಯ ಹೆಂಚು ಗಾಳಿಗೆ ಹಾರಿಹೋಗಿ 20,000ರೂ. ನಷ್ಟ ಉಂಟಾಗಿದೆ.
ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಮುತ್ತು ಪೂಜಾರ್ತಿ, ವಡ್ಡರ್ಸೆ ಗ್ರಾಮದ ಶಿವಕುಮಾರ್, ಬೈಕಾಡಿ ಗ್ರಾಮದ ರಾಜೀವ ಶೆಟ್ಟಿ ಹಾಗೂ ಚೇರ್ಕಾಡಿ ಗ್ರಾಮದ ರಾಮ ಹಾಂಡರ ವಾಸ್ತವ್ಯದ ಪಕ್ಕಾ ಮನೆಗಳು ಗಾಳಿ-ಮಳೆಗೆ ಹಾಗೂ ಮರಬಿದ್ದು ಭಾಗಶ: ಹಾನಿಯಾಗಿದ್ದು 15,000ರೂ.ಗಳಿಂದ 70,000ರೂ.ವರೆಗೆ ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ತೆಂಕಗ್ರಾಮದ ಅಕ್ಕಣಿ ಇವರ ಮನೆಗೆ 60,000ರೂ., ಹೆಬ್ರಿ ತಾಲೂಕು ವರಂಗ ಗ್ರಾಮದ ಅಣ್ಣಯ್ಯ ಶೆಟ್ಟಿ ಮನೆಗೆ ಹತ್ತು ಸಾವಿರ ಹಾಗೂ ಕಾರ್ಕಳ ತಾಲೂಕು ಬೋಳ ಗ್ರಾಮದ ಸುಂದರ ಪೂಜಾರಿ, ಮಾಳ ಗ್ರಾಮದ ಗೋವಿಂದ ಗೌಡ, ಮರ್ಣೆ ಗ್ರಾಮದ ವೀರಪ್ಪ ನಾಯ್ಕರ ಮನೆಗೆ 4000ರೂ.ನಿಂದ 40,000ರೂ.ವರೆಗೆ ನಷ್ಟ ಉಂಟಾಗಿರುವುದಾಗಿ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.