ವಿದ್ಯಾರ್ಥಿಗಳ ಮೆದುಳಿಗೆ ಒತ್ತಡ ತುಂಬದಿರಿ: ಶೇಖ್ ಮಹಮ್ಮದ್ ಇರ್ಫಾನಿ
ಕಲ್ಲಡ್ಕ : ವರ್ಷದ ಮುನ್ನೂರೈವತ್ತು ದಿನಗಳ ಪಾಠವನ್ನು ಪರೀಕ್ಷಾ ಕೊಠಡಿಯಲ್ಲಿ ಕೇವಲ ಮೂರು ಗಂಟೆಗಳಲ್ಲಿ ಬರೆದು ಮುಗಿಸುವ ಮಕ್ಕಳ ಮೆದುಳಿನಲ್ಲಿನ ಅಪಾರ ಶಕ್ತಿ ನಿಜಕ್ಕೂ ಅತ್ಯದ್ಭುತ. ಈ ಮಧ್ಯೆ ಹೆತ್ತವರು ಆ ಮೆದುಳಿಗೆ ಖಾಸಗಿ ಒತ್ತಡ ತುಂಬದಿರಿ ಎಂದು ಕಲ್ಲಡ್ಕ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಹೇಳಿದರು.
ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷಾ ಪೂರ್ವ ಸಿದ್ಧತೆ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳೇ ನೀವು ಅಸಾಧ್ಯ ಎಂಬ ಪದದಿಂದ ಅ ಎಂಬ ಪದವನ್ನು ಎತ್ತಿ ಬಿಸಾಕಿದಲ್ಲಿ ಮತ್ತೆ ಇರುವ ಪದ ಸಾಧ್ಯ. ಈ ಮಾತು ನಿಮಗೆ ಅನ್ವಯಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜವಾಝ್ ಮಾತನಾಡಿ, ಇಂದಿನ ಮಕ್ಕಳೆ ಮುಂದಿನ ಜನಾಂಗ, ನೀವು ಮುಂದೆ ನಾಯಕತ್ವ ವಹಿಸಿಕೊಂಡು ದೇಶವನ್ನು ಮುನ್ನಡೆಸಲಿದ್ದೀರಿ ಎಂದು ಶುಭಹಾರೈಸಿದರು.
ಮುನೀರುಲ್ ಇಸ್ಲಾಂ ಮದ್ರಸ ಸದರ್ ಬಿ.ಟಿ. ಇಕ್ಬಾಲ್ ದಾರಿಮಿ ಸ್ವಾಗತಿಸಿದರು. ಆಡಳಿತ ಸಮಿತಿ ಸದಸ್ಯ ಖಾಸಿಂ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಅಬೂಬಕರ್ ಸಾಹೇಬ್ ವಹಿಸಿದ್ದರು. ಆಡಳಿತ ಸಮಿತಿ ಸದಸ್ಯ ಅಬ್ದುಲ್ ಹಮೀದ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.