ಜಿ+3 ಮಾದರಿ ವಸತಿ ನಿರ್ಮಾಣ ಯೋಜನಾ ಸಭೆ
ಮಂಗಳೂರು, ಜು.19: ಮಂಗಳೂರು ಮಹಾನಗರ ಪಾಲಿಕೆಯ ಶಕ್ತಿನಗರದ ಪದವು ಗ್ರಾಮದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣ ಮಾಡಲು ಉದ್ದೇಶಿಸಿದ ಜಿ+3 ಮಾದರಿಯ ವಸತಿ ನಿರ್ಮಾಣ ಯೋಜನೆಯ ಕುರಿತು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಈ ಕುರಿತು ಮಾತನಾಡಿದ ಶಾಸಕ ಕಾಮತ್, ಶಕ್ತಿನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜ್ಯ ಸರಕಾರದ ಅನುದಾನದಡಿಯಲ್ಲಿ ಪದವು ಗ್ರಾಮದಲ್ಲಿ ಮಂಜೂರಾತಿಯಾಗಿರುವ ಜಿ+3 ಮಾದರಿಯ ವಸತಿ ಗೃಹಗಳ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಕೆಲವೊಂದು ಕಾನೂನು ತೊಡಕುಗಳಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳದಲ್ಲಿರುವಂತಹ ಮರಗಳನ್ನು ತೆರವುಗೊಳಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅನುಮತಿಯನ್ನು ಪಡೆಯಲು ಮತ್ತು ಮರು ಅರಣ್ಯೀಕರಣಕ್ಕಾಗಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದಲ್ಲಿ 20 ಎಕರೆ ಜಮೀನನ್ನು ಮಂಗಳೂರು ವಲಯ ಅರಣ್ಯ ಇಲಾಖೆಯ ಹೆಸರಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕಲಂ 71ರ ಅನ್ವಯ ಜಮೀನನ್ನು ಕಾಯ್ದಿರಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪಾಲಿಕೆ ಜಂಟಿ ಆಯುಕ್ತ ಸಂತೋಷ್, ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿ, ಪಾಲಿಕೆ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.