ಸಿಎಂ ಬಿಎಸ್ ವೈ ಮನೆಗೆ ಭೇಟಿ ನೀಡಿದ್ದ ಸ್ವಾಮೀಜಿಗಳಿಗೆ 'ಕವರ್' ಹಂಚಿಕೆ: ವೀಡಿಯೊ ವೈರಲ್
ಬೆಂಗಳೂರು, ಜು. 21: ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ 'ನಾಯಕತ್ವ ಬದಲಾವಣೆ'ಯ ವಿಚಾರಕ್ಕೆ ಸಂಬಂಧಿಸಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸ್ವಾಮೀಜಿಗಳಿಗೆ ಮುಚ್ಚಿದ ಕವರ್ ಹಂಚಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಎರಡು ದಿನಗಳಿಂದ 'ನಾಯಕತ್ವ ಬದಲಾವಣೆ' ವಿಚಾರಕ್ಕೆ ಸಂಬಂಧಿಸಿ ಹಲವು ಮಠಾಧೀಶರು, ಸಿಎಂ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ವರಿಷ್ಠರನ್ನು ಒತ್ತಾಯಿಸುತ್ತಿದ್ದಾರೆ.
ಇದೀಗ ಮಠಾಧೀಶರ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಸ್ವಾಮೀಜಿಗಳಿಗೆ ಮುಚ್ಚಿದ ಲಕೋಟೆಯನ್ನು ಮುಖ್ಯಮಂತ್ರಿಯವರ ಸಮ್ಮುಖದಲ್ಲೇ ಹಂಚುವ ವೀಡಿಯೊ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಆಪ್ತರೊಬ್ಬರು ಸ್ವಾಮೀಜಿಗಳಿಗೆ ಕವರ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕವರ್ ನಲ್ಲಿ ಏನಿತ್ತು ಎಂದು ಗೊತ್ತಾಗಿಲ್ಲ