ಯುಪಿಸಿಎಲ್ನಿಂದ ಕಲ್ಲಿದ್ದಲು ಮಿಶ್ರಿತ ನೀರು: ಎಲ್ಲೂರು ಗ್ರಾಪಂನಿಂದ ಕಾನೂನು ಕ್ರಮದ ಎಚ್ಚರಿಕೆ
ಪಡುಬಿದ್ರೆ, ಜು.30: ಎಲ್ಲೂರು ಗ್ರಾಪಂ ವ್ಯಾಪ್ತಿಯ ಉಳ್ಳೂರು ಪರಿಸರದಲ್ಲಿ ಕಲ್ಲಿದ್ದಲು ಮಿಶ್ರಿತ ನೀರನ್ನು ಯುಪಿಸಿಎಲ್ ಕಂಪೆನಿ ಹೊರಬಿಡುತ್ತಿದ್ದು, ಇದನ್ನು ತಡೆಗಟ್ಟದಿದ್ದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಎಲ್ಲೂರು ಗ್ರಾಪಂ ನೀಡಿದೆ.
ಇಲ್ಲಿನ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಕಂಪೆನಿಯು ಎರಡು ದಿನಗಳ ಹಿಂದೆ ಮಳೆ ಬಂದಾಗ ಕಲ್ಲಿದ್ದಲು ಮಿಶ್ರಿತ ನೀರನ್ನು ಹೊರ ಬಿಟ್ಟಿದ್ದು, ಇದರಿಂದ ಕೃಷಿ ಚಟುವಟಿಕೆಗೆ ಸಮಸ್ಯೆ ಉಂಟಾಗಿದೆ.
ಈ ಬಗ್ಗೆ ಮಾತನಾಡಿದ ಎಲ್ಲೂರು ಗ್ರಾಪಂ ಅಧ್ಯಕ್ಷ ಜಯಂತ್ ಕುಮಾರ್, ಯುಪಿಸಿಎಲ್ ಕಂಪೆನಿಗೆ ಕಲ್ಲಿದ್ದಲು ಮಿಶ್ರಿತ ನೀರನ್ನು ಹೊರಬಿಡಬಾರದು ಎಂದು ಪಂಚಾಯತ್ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯ ಸಂದರ್ಭದಲ್ಲಿ ಮತ್ತೆ ಕರಿಯ ಶೆಟ್ಟಿ ಎಂಬವರ ಮನೆ ಬಳಿಯ ತೋಡಿಗೆ ಕಲ್ಲಿದ್ದಲು ಮಿಶ್ರಿತ ನೀರು ಹೊರಬಿಟ್ಟಿದ್ದು, ಇದರಿಂದ ಗದ್ದೆಗಳಿಗೆ ನೀರು ಹೋಗಿ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಿದೆ. ಕೂಡಲೇ ಈ ಬಗ್ಗೆ ಕಂಪೆನಿ ಕ್ರಮಕೈಗೊಳ್ಳದಿದ್ದಲ್ಲಿ ಗ್ರಾಪಂ ಕಂಪೆನಿ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.