ಆಫ್ರಿಕಾ ಪ್ರಜೆಗಳ ಬಂಧನ ಪ್ರಕರಣ: ಓರ್ವ ಮಾದಕ ವಸ್ತು ಸೇವಿಸಿದ್ದ; ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ
ಬೆಂಗಳೂರು, ಆ.3: ಆಫ್ರಿಕಾ ಪ್ರಜೆಯ ಅನುಮಾನಾಸ್ಪದ ಸಾವು ಖಂಡಿಸಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪ ಸಂಬಂಧ ಬಂಧಿತರಾದ ಐವರು ವಿದೇಶಿಯರ ಪೈಕಿ ಓರ್ವ ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂತ್ರ ಪರೀಕ್ಷೆ ಸಂದರ್ಭದಲ್ಲಿ ಗುಲೋರ್ಡ್ ಎಂಬಾತ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ ಎಂದು ಅವರು ಹೇಳಿದರು.
ಇನ್ನು, ಮೃತ ಆಫ್ರಿಕಾ ಪ್ರಜೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಶವವನ್ನು ಯಾರಿಗೆ ಹಸ್ತಾಂತರ ಮಾಡುವುದರ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳ ಅಭಿಪ್ರಾಯ ಕೇಳಲಾಗುವುದು ಎಂದ ಅವರು, ಮೃತ ಕಾಂಗೋ ಪ್ರಜೆ ಸಾವಿನ ಸಂಬಂಧ ಜೆ.ಸಿ.ನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಈಗಾಗಲೇ ಗಲಭೆಯ ಪೂರ್ತಿ ವಿಡಿಯೊಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಆರೋಪಿಗಳನ್ನು ಪೊಲೀಸ್ ಕಸ್ಟಡಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.