ಅಸ್ತಾನಾ ನೇಮಕದ ವಿರುದ್ಧದ ಅರ್ಜಿ ನೋಂದಣಿ ಸಂಖ್ಯೆ ಹೊಂದಿದ್ದರೆ ವಿಚಾರಣೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಆ.3: ಪ್ರಕಾಶ ಸಿಂಗ್ ಪ್ರಕರಣದಲ್ಲಿ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಉಲ್ಲಂಘಿಸಿ ರಾಕೇಶ ಅಸ್ತಾನಾರನ್ನು ದಿಲ್ಲಿಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ವಿರುದ್ಧದ ನ್ಯಾಯಾಂಗ ನಿಂದನೆ ದೂರಿಗೆ ರಿಜಿಸ್ಟ್ರಿಯು ನೋಂದಣಿ ಸಂಖ್ಯೆಯನ್ನು ನೀಡಿದ್ದರೆ ಅದನ್ನು ವಿಚಾರಣೆಗಾಗಿ ಅಂಗೀಕರಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಿಳಿಸಿದೆ.
ಅಸ್ತಾನಾ ನೇಮಕದ ವಿರುದ್ಧ ತಾನು ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದು,ಅದನ್ನು ಸೋಮವಾರ ವಿಚಾರಣೆ ನಡೆಸುವಂತೆ ಅರ್ಜಿದಾರ ಎಂ.ಎಲ್.ಶರ್ಮಾ ನಿವೇದಿಸಿಕೊಂಡಾಗ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾ.ಸೂರ್ಯಕಾಂತ ಅವರ ಪೀಠವು,ಅದಕ್ಕೆ ನೋಂದಣಿ ಸಂಖ್ಯೆ ಸಿಕ್ಕಿದರೆ ವಿಚಾರಣೆಗೆ ಅಂಗೀಕರಿಸುತ್ತೇವೆ ಎಂದು ತಿಳಿಸಿತು.
ಬಿಎಸ್ಎಫ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ 1984ರ ತಂಡದ ಐಪಿಎಸ್ ಅಧಿಕಾರಿ ಅಸ್ತಾನಾರನ್ನು ಅವರ ನಿವೃತ್ತಿಗೆ ಕೇವಲ ನಾಲ್ಕು ದಿನಗಳು ಬಾಕಿಯಿದ್ದಾಗ ಜು.27ರಂದು ದಿಲ್ಲಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕಗೊಳಿಸಲಾಗಿದ್ದು,ಒಂದು ವರ್ಷದ ಅಧಿಕಾರಾವಧಿಯನ್ನು ಹೊಂದಿರಲಿದ್ದಾರೆ.