ಅಧಿಕಾರ ಮೈಮರೆಯುವುದಕ್ಕಲ್ಲ, ಜನರ ಸೇವೆಗಾಗಿ: ಸಚಿವ ಸುನೀಲ್ ಕುಮಾರ್
ಕಾರ್ಕಳ : ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಮತ್ತು ಅಧಿಕಾರ ಸಿಕ್ಕಿರುವುದು ಮೈಮರೆಯುವುದಕ್ಕಲ್ಲ ಜನ ಸೇವೆಗಾಗಿ. ಕಾರ್ಕಳದ ಅಭಿವೃದ್ಧಿ ಗಾಗಿ ಏನೇನು ಅವಕಾಶ ಸಿಗುತ್ತದೋ ಅದರ ಉಪಯೋಗ ಮಾಡುತ್ತೇನೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪಕ್ಷದ ಹಾಗೂ ಜನತೆಯ ವಿಶ್ವಾಸವನ್ನು ಖಂಡಿತವಾಗಿ ಉಳಿಸುತ್ತೇನೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಅವರು ಕಾರ್ಕಳದ ಬಂಡೀಮಠ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಹಿಂದುತ್ವ, ಅಭಿವೃದ್ಧಿ ಯುವ ನಾಯಕತ್ವ ಎಂಬ ಮೂಲ ಮಂತ್ರದೊಂದಿಗೆ ಕೆಲಸ ಮಾಡುವ ನನಗೆ ಹಿಂದುತ್ವ ನನ್ನ ಬದ್ಧತೆ, ಅಭಿವೃದ್ಧಿ ನನ್ನ ಚಟುವಟಿಕೆಗೆ ಸ್ಪೂರ್ತಿ, ಯುವ ನಾಯಕತ್ವ ನನ್ನ ಶಕ್ತಿ. ಶಾಸಕನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ನನಗೆ ಮಂತ್ರಿಯಾಗಿ ಯಶಸ್ಸು ಗಳಿಸಲು ಕಾರ್ಕಳದ ಜನತೆಯ ಸಹಕಾರ ಅತ್ಯಗತ್ಯ ಎಂದರು.
ವಿಧಾನ ಸೌಧಕ್ಕೆ ಹೋಗುತ್ತೇನೆ ಎಂಬ ಕನಸು ಕಲ್ಪನೆ ಇರಲಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು. ಯಾರೂ ಅರಿಯದ ನನ್ನನ್ನು ಕರೆತಂದು ಅವಕಾಶ ನೀಡಿ, ಪಕ್ಷ ನನ್ನನ್ನು ಗೆಲ್ಲಿಸಿದೆ. ಗೆಲ್ಲಲೇಬೇಕಾದ ಸಾಹಸ ಕೂಡ ಕಾರ್ಯಕರ್ತರು ನಡೆಸಿದ ಪರಿಣಾಮ ಮಂತ್ರಿ ಯಾಗಿ ಪಕ್ಷ , ಜಾತಿ, ವಯಸ್ಸಿನ ಭೇದವಿಲ್ಲದೆ ಎರಡೂ ಜಿಲ್ಲೆಯ ಜನತೆಯ ಧ್ವನಿಯಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಎಂದು ಸುನೀಲ್ ಕುಮಾರ್ ಹೇಳಿದರು.
ಸುನೀಲ್ ಕುಮಾರ್ ಗೆ ಕಾರ್ಕಳದಲ್ಲಿ ಸ್ವಾಗತ
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಬಾರಿಗೆ ಕಾರ್ಕಳಕ್ಕೆ ಆಗಮಿಸಿದಾಗ ಶುಕ್ರವಾರ ಬಂಡೀಮಠ ಬಸ್ ನಿಲ್ದಾಣದ ಬಳಿ ಸುನೀಲ್ ಕುಮಾರ್ ಅವರಿಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಆರೆಸೆಸ್ ಮುಖಂಡ ಬೋಳ ಪ್ರಭಾಕರ್ ಕಾಮತ್, ಬಿಜೆಪಿ ಮುಖಂಡರಾದ ನ್ಯಾಯವಾದಿ ಎಂಕೆ ವಿಜಯ ಕುಮಾರ್, ಭಾಸ್ಕರ ಕೋಟ್ಯಾನ್, ವೆಂಕಟರಮಣ ದೇವಳದ ಆಡಳಿತ ಮುಕ್ತೇಸರರಾದ ಜಯರಾಮ್ ಪ್ರಭು, ಈಶಾವ್ಯಸಂ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್, ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ, ಲಾಲಾಜಿ ಅರ್. ಮೆಂಡನ್, ಸುಕುಮಾರ್ ಶೆಟ್ಟಿ , ಕರ್ನಾಟಕ.ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.
ಕೊಂಕಣಿ ಅಕಾಡಮಿ ಅಧ್ಯಕ್ಷ ಡಾ.ಜಗದೀಶ್ ಪೈ, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಪದ್ಮಗೋಪಾಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹಗ್ಡೆ, ಪ್ರಧಾನ ಕಾರ್ಯದರ್ಶಿ ಜಯರಾಮ್ ಸಾಲಿಯಾನ್, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ರತ್ನಾಕರ ಅಮೀನ್, ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.