ನಡೆಯದ ಸಂಸತ್ ಕಲಾಪ; ಹೊಣೆ ಯಾರು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಿ ಎರಡು ವಾರಗಳು ದಾಟಿದವು. ಆದರೆ ಒಂದೇ ಒಂದು ದಿನವೂ ಉಭಯ ಸದನಗಳ ಕಲಾಪ ಸರಿಯಾಗಿ ನಡೆದಿಲ್ಲ. ಎರಡೂ ಸದನಗಳು ಪದೇ ಪದೇ ಮುಂದೂಡಲ್ಪಡುತ್ತಲೇ ಇವೆ. ಸಂಸದೀಯ ಪ್ರಜಾತಂತ್ರದ ಅತ್ಯುನ್ನತ ನೀತಿ ನಿರ್ಧಾರಕ ವೇದಿಕೆಯೆಂದು ಹೆಸರಾದ ಸಂಸತ್ತಿನ ಕಲಾಪ ಈ ರೀತಿ ವ್ಯರ್ಥವಾಗುತ್ತಿರುವುದು ಜನತಂತ್ರದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನೇ ಬಳಸಿಕೊಂಡು ಕೇಂದ್ರ ಸರಕಾರ ತನಗೆ ಬೇಕಾದ ವಿಧೇಯಕಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಿ ಮಾಡಿಕೊಳ್ಳುತ್ತಿದೆ.
ಸಂಸತ್ತಿನ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಆಡಳಿತ ಹಾಗೂ ಪ್ರತಿಪಕ್ಷಗಳ ಹೊಣೆಗಾರಿಕೆಯಾಗಿದೆ. ಅದರಲ್ಲೂ ಅಧಿಕಾರದಲ್ಲಿರುವ ಪಕ್ಷದ ಜವಾಬ್ದಾರಿ ಇನ್ನೂ ಹೆಚ್ಚಿನದಾಗಿದೆ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನದ ಕಲಾಪ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ಜವಾಹರಲಾಲ್ ನೆಹರೂ ಕಾಲದಿಂದಲೂ ಭಾರತದ ಸಂಸತ್ತು ತನ್ನ ಘನತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಅದರ ಘನತೆಗೆ ಚ್ಯುತಿ ಬಂದಿದೆ ಎಂದು ಹೇಳಿದರೆ ತಪ್ಪಾಗಲಾರದು.
ಈ ಬಾರಿ ಸಂಸತ್ ಕಲಾಪ ಅಸ್ತವ್ಯಸ್ತಗೊಳ್ಳಲು ಮುಖ್ಯ ಕಾರಣ ಪೆಗಾಸಸ್ ಗೂಢಚರ್ಯೆ ಹಾಗೂ ದೇಶದ ರೈತಾಪಿ ವರ್ಗದ ಅಸಮಾಧಾನಕ್ಕೆ ಕಾರಣವಾದ ಕೃಷಿಗೆ ಸಂಬಂಧಿಸಿದ ಕಾಯ್ದೆಯಾಗಿದೆ. ಅದರಲ್ಲೂ ಮುಖ್ಯವಾಗಿ ಪೆಗಾಸಸ್ ತಂತ್ರಾಂಶಗಳನ್ನು ಬಳಸಿಕೊಂಡು ಗೂಢಚರ್ಯೆ ನಡೆದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟೀಕರಣ ನೀಡಬೇಕೆಂಬುದು ಪ್ರತಿಪಕ್ಷಗಳ ಒಕ್ಕೊರಲಿನ ಆಗ್ರಹವಾಗಿದೆ. ಆದರೆ ಸಂಸತ್ತಿನಲ್ಲಿ ಹೇಳಿಕೆ ನೀಡಲು ಪ್ರಧಾನಿ ಹಿಂಜರಿಯುತ್ತಿದ್ದಾರೆ. ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡುವ ಬದಲಾಗಿ ಸಂಸತ್ತಿನ ಹೊರಗೆ ಪ್ರತಿಪಕ್ಷಗಳು ದೇಶದ್ರೋಹದ ರಾಜಕೀಯ ಮಾಡುತ್ತಿವೆ ಎಂದು ಮೋದಿಯವರು ಟೀಕಿಸುತ್ತಿದ್ದಾರೆ. ಇದು ಪ್ರತಿಪಕ್ಷಗಳನ್ನು ಇನ್ನಷ್ಟು ಕೆರಳಿಸಿದೆ. ಹೀಗಾಗಿ ಸಂಸತ್ತಿನ ಉಭಯ ಸದನಗಳು ಕೋಲಾಹಲದ ತಾಣಗಳಾಗಿವೆ.
ಪೆಗಾಸಸ್ ತಂತ್ರಜ್ಞಾನ ಬಳಸಿಕೊಂಡು ಗೂಢಚರ್ಯೆ ನಡೆದ ಬಗ್ಗೆ ಸರಕಾರ ಉತ್ತರ ನೀಡಲು ಹಿಂಜರಿಯುತ್ತಿರುವುದನ್ನು ಗಮನಿಸಿದರೆ ಸರಕಾರದ ಪಾರದರ್ಶಕತೆ ಬಗ್ಗೆ ಸಹಜವಾಗಿ ಸಂಶಯ ಉಂಟಾಗುತ್ತದೆ.ಸರಕಾರ ಇದನ್ನು ಒಪ್ಪಿಕೊಳ್ಳುತ್ತಲೂ ಇಲ್ಲ, ನಿರಾಕರಿಸುತ್ತಲೂ ಇಲ್ಲ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ಹೇಳಿಕೆಯನ್ನೇನೋ ನೀಡಿದ್ದಾರೆ. ಆದರೆ ಹಾರಿಕೆ, ಜಾರಿಕೆಯ ಹೇಳಿಕೆಗಳಿಂದ ಸಂದೇಹ ನಿವಾರಣೆಯಾಗುವುದಿಲ್ಲ. ಅನಧಿಕೃತವಾಗಿ ಯಾವುದೇ ಗೂಢಚರ್ಯೆ ನಡೆದಿಲ್ಲ ಎಂಬ ವೈಷ್ಣವ್ ಹೇಳಿಕೆಯ ಅರ್ಥವೇನು? ಅನಧಿಕೃತವಾಗಿ ಗೂಢಚರ್ಯೆ ನಡೆದಿದೆ ಎಂಬುದನ್ನು ಸರಕಾರ ನಿರಾಕರಿಸುತ್ತದೆ. ಆದರೆ ಗೂಢಚರ್ಯೆ ನಡೆದಿದೆ ಎಂಬುದನ್ನು ನಿರಾಕರಿಸುತ್ತಿಲ್ಲ. ಸರಕಾರದ ಈ ಇಬ್ಬಂದಿತನದ ಗೊಂದಲಮಯವಾದ ಹೇಳಿಕೆ ಸಹಜವಾಗಿ ಪ್ರತಿಪಕ್ಷ ಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇಂಥ ಅಪನಂಬಿಕೆಯ ಆತಂಕದ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉತ್ತರ ಅನಿವಾರ್ಯವಾಗಿದೆ. ಇದೊಂದು ವಿಶೇಷ ಸಂದರ್ಭ. ಸಂಸತ್ ಅಧಿವೇಶನದ ಮೊದಲ ದಿನವೇ ಪ್ರಧಾನಿಯವರು ಈ ಕುರಿತು ಸ್ಪಷ್ಟೀಕರಣ ನೀಡಿದ್ದರೆ ಸದನದಲ್ಲಿ ಕೋಲಾಹಲಕ್ಕೆ ಅವಕಾಶವೇ ಇರುತ್ತಿರಲಿಲ್ಲ. ತಮ್ಮ ಸಚಿವಾಲಯ ಸೇರಿದಂತೆ ಎಲ್ಲಾ ಸಚಿವಾಲಯಗಳಲ್ಲಿ ಹಾಗೂ ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದು ಪ್ರಧಾನ ಮಂತ್ರಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ.ಅವರು ನೇರವಾಗಿ ಸದನಕ್ಕೆ ಬಂದು ಪೆಗಾಸಸ್ ತಂತ್ರಜ್ಞಾನವನ್ನು ಬಳಸಿಕೊಂಡು ಗೂಢಚರ್ಯೆ ನಡೆದಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದರೆ ಈ ಕುರಿತು ಉಂಟಾಗಿರುವ ಸಂಶಯ ನಿವಾರಣೆಯಾದಂತಾಗುತ್ತದೆ. ಆದರೆ ಪ್ರಧಾನಿ ತಾವು ಸದನಕ್ಕೆ ಬಂದು ಉತ್ತರ ನೀಡದೇ ತಮ್ಮ ಸಂಪುಟದ ಸಚಿವರಿಂದ ತಳಬುಡವಿಲ್ಲದ ಹೇಳಿಕೆ ನೀಡಿಸುತ್ತಿರುವುದು ಪರಿಸ್ಥಿತಿ ಉಲ್ಬಣಗೊಳ್ಳಲು ಕಾರಣವಾಗಿದೆ.
ಸರಕಾರದ ಈ ಮೌನ ಇನ್ನಷ್ಟು ಪ್ರಶ್ನೆಗಳು ಉದ್ಭವವಾಗಲು ಕಾರಣವಾಗಿದೆ. ಸರಕಾರಕ್ಕೆ ಗೊತ್ತಿಲ್ಲದಂತೆ ದೇಶದಲ್ಲಿ ಯಾವುದೋ ಸಂಸ್ಥೆ ಗೂಢಚರ್ಯೆ ನಡೆಸುತ್ತಿದೆಯೇ? ಅಥವಾ ನಮ್ಮ ಸರಕಾರಕ್ಕೆ ಗೊತ್ತಿಲ್ಲ ದಂತೆ ಬೇರೆ ಯಾವುದೋ ದೇಶ ಭಾರತೀಯರ ಮೇಲೆ ಗೂಢಚರ್ಯೆ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಈ ಉತ್ತರಕ್ಕಾಗಿ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಪೆಗಾಸಸ್ ಪ್ರಕರಣ ನಿಜವಾಗಿದ್ದರೆ ಅದು ಅತ್ಯಂತ ಗಂಭೀರ ಸ್ವರೂಪದ ಪ್ರಕರಣ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿರುವುದನ್ನು ಗಮನಿಸಬೇಕು.
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ದೇಶದ ಜನರಿಂದ ಏನೋ ಮುಚ್ಚಿಡುತ್ತಿದೆ. ಪೆಗಾಸಸ್ ತಂತ್ರಜ್ಞಾನದ ಖರೀದಿಗೆ ಸರಕಾರದ ಹಣ ಪಾವತಿಯಾಗಿದೆಯೇ ಆಗಿದ್ದರೆ ಎಷ್ಟು ಪಾವತಿಯಾಗಿದೆ. ಈ ಬಗ್ಗೆ ಸಂಶಯ ನಿವಾರಣೆಯಾದರೆ ಸಂಸತ್ತಿನ ಉಭಯ ಸದನಗಳ ಕಲಾಪ ಸುಗಮವಾಗಿ ನಡೆಯಲು ಅನುಕೂಲವಾಗುತ್ತದೆ. ಅಂತಲೇ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಲು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಸರಕಾರ ತನಿಖೆಗೆ ತಯಾರಿಲ್ಲ. ಹೀಗಾಗಿ ಪರಿಸ್ಥಿತಿ ಹದಗೆಟ್ಟಿದೆ.
ಸಂಸತ್ತಿನ ಉಭಯ ಸದನಗಳ ಕಲಾಪ ನಡೆಸಲು ಪ್ರತಿದಿನ ಜನತೆಯ ಬೊಕ್ಕಸದಿಂದ ಒಂದೂವರೆ ಕೋಟಿ ರೂಪಾಯಿ ವ್ಯಯವಾಗುತ್ತಿದೆ. ಇದರ ಜೊತೆಗೆ ಸಂಸದರಿಗೆ ನೀಡುವ ಭತ್ತೆ ಇತ್ಯಾದಿಗಳು ಸೇರಿಲ್ಲ. ಈ ಬಾರಿ ಸಂಸತ್ ಅಧಿವೇಶನ ನಿಗದಿಯಾಗಿದ್ದು ಹತ್ತೊಂಭತ್ತು ದಿನಗಳಿಗೆ ಮಾತ್ರ. ಆದರೆ ಸದನ ಸೇರಿದಾಗಿನಿಂದ ಕೋಲಾಹಲ ನಡೆದು ಕಲಾಪ ನಡೆಯಲೇ ಇಲ್ಲ. ಇದನ್ನೇ ಉಪಯೋಗಿಸಿಕೊಂಡು ಸರಕಾರ ಮೂರು ವಿಧೇಯಕಗಳಿಗೆ ಚರ್ಚೆಯಿಲ್ಲದೆ ಸದನದ ಒಪ್ಪಿಗೆ ಪಡೆದಿದೆ. ಇದು ಸರಿಯಲ್ಲ.
ಇನ್ನು ಒಂದು ವಾರ ಕಾಲ ಅಂದರೆ ಆಗಸ್ಟ್ 13ರವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಇನ್ನಾದರೂ ಸರಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಪೆಗಾಸಸ್ ಕುರಿತ ಸಂಶಯವನ್ನು ನಿವಾರಣೆ ಮಾಡಬೇಕು.
ಈ ಬಗ್ಗೆ ಸಂಸತ್ತಿನ ಜಂಟಿ ಸಮಿತಿಯ ಮೂಲಕ ಇಲ್ಲವೇ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆಯನ್ನು ನಡೆಸುವುದಕ್ಕೆ ಹಿಂಜರಿಯಬಾರದು. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸದನದ ಹೊರಗೆ ಪ್ರತಿಪಕ್ಷಗಳನ್ನು ನಿಂದಿಸುವ ಬದಲಾಗಿ ಸದನಕ್ಕೆ ಬಂದು ಸ್ಪಷ್ಟೀಕರಣ ನೀಡಿ ಸಂದೇಹವನ್ನು ನಿವಾರಣೆ ಮಾಡಬೇಕು. ಸದನದ ಉಳಿದ ದಿನಗಳ ಕಲಾಪ ಸುಗಮವಾಗಿ ನಡೆಯುವಂತೆ ಮಾಡಬೇಕು.
ಪ್ರಜಾಪ್ರಭುತ್ವದಲ್ಲಿ ಜನತೆಯ ಬಾಯಿ ಮುಚ್ಚಿಸಲು, ಪ್ರತಿಪಕ್ಷಗಳನ್ನು ಹಣಿಯಲು ಯಾವುದೇ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸರಿಯಲ್ಲ. ಸದನದ ಕಲಾಪಗಳನ್ನು ದೇಶ ಮಾತ್ರವಲ್ಲ ಜಗತ್ತಿನ ಜನ ಗಮನಿಸುತ್ತಿರುತ್ತಾರೆ. ಅವರೆದುರು ನಮ್ಮ ಜನಪ್ರತಿನಿಧಿಗಳು ಅಪಹಾಸ್ಯಕ್ಕೀಡಾಗಬಾರದು. ಸರಕಾರ ಪ್ರತಿಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸತ್ತಿನ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.