ಬೆಳ್ತಂಗಡಿ : 2 ವರ್ಷ ಪ್ರಾಯದ ಮಗು ನಾಪತ್ತೆ
ಬೆಳ್ತಂಗಡಿ : ಸುಲ್ಕೇರಿ ಗ್ರಾಮದ ಜಂತಿಗೋಳಿ ಪರಾರಿ ಎಂಬಲ್ಲಿ ಮನೆಯಲ್ಲಿದ್ದ 2 ವರ್ಷ ಪ್ರಾಯದ ಮಗು ಮಂಗಳವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದೆ.
ಸುಲ್ಕೇರಿ ಜಂತಿಗೋಳಿ ಪರಾರಿ ನಿವಾಸಿ ಸಂಜೀವ ಶೆಟ್ಟಿ ಎಂಬವರ ಪುತ್ರಿ ನಾಪತ್ತೆಯಾದ ಮಗು.
ಮಂಗಳವಾರ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಮನೆಯಲ್ಲಿಯೇ ಬಿಟ್ಟು ತಮ್ಮ ತಾಯಿಯೊಂದಿಗೆ ದನಗಳಿಗೆ ಹುಲ್ಲು ತರಲೆಂದು ಮನೆ ಸಮೀಪದ ತೋಟಕ್ಕೆ ಹೋಗಿದ್ದರು. ಹಿಂದಿರುಗಿ ಬಂದ ವೇಳೆ ಮಗು ಮನೆಯಲ್ಲಿ ಕಾಣಿಸಲಿಲ್ಲ. ಇವರು ಮನೆ ಸಮೀಪ ಹುಡುಕಾಟ ನಡೆಸಿದ್ದಾರೆ. ಆದರರ ಮಗುವಿನ ಸುಳಿವು ಪತ್ತೆಯಾಗಿಲ್ಲ. ಮಗು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಊರವರು ಶೋಧಕಾರ್ಯ ನಡೆಸುತ್ತಿದ್ದು, ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ವೇಣೂರು ಠಾಣೆ ಎಸ್.ಐ ಲೋಲಾಕ್ಷ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಶೋಧಕಾರ್ಯ ನಡೆಸುತ್ತಿದ್ದಾರೆ ರಾತ್ರಿಯ ವರೆಗೆ ಹುಡುಕಾಟ ಮುಂದುವರೆದಿದೆ. ಆದರೆ ಯಾವುದೇ ಸುಳಿವು ಲಭಿಸಿಲ್ಲ.
ಮನೆಯಿಂದ 100 ಮೀಟರ್ ದೂರದಲ್ಲಿ ನದಿಯೊಂದು ಹರಿಯುತ್ತಿದ್ದು, ಮಗು ನದಿ ಸಮೀಪ ಹೋಗಿರಬಹುದೇ ಎಂಬ ಅನುಮಾನ ಕಾಡುತ್ತಿದ್ದು ಮುಳುಗು ತಜ್ಞರ ಸಹಕಾರದೊಂದಿಗೆ ನದಿಯಲ್ಲಿಯೂ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.