ಮಂಗಳೂರು : ಸುಗಂಧ ದ್ರವ್ಯ ತಯಾರಿಕಾ ಕಂಪೆನಿಯಲ್ಲಿ ಮತ್ತೆ ಬೆಂಕಿ ಅನಾಹುತ
ಮಂಗಳೂರು, ಆ.12: ಸುರತ್ಕಲ್ ಸಮೀಪದ ಎಸ್ಇಝಡ್ನಲ್ಲಿರುವ ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಗುರುವಾರ ಬೆಂಕಿ ಅನಾಹುತ ಸಂಭವಿಸಿದೆ. ಇದರಿಂದ ಭಾರೀ ಪ್ರಮಾಣದ ಹೊಗೆ ಪರಿಸರದಲ್ಲಿ ಹರಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಳೆದ ಎಪ್ರಿಲ್ನಲ್ಲಿ ಈ ಕಂಪೆನಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅದರ ದುರಸ್ತಿ ಕಾರ್ಯವು ಈಗಲೂ ಮುಂದುವರಿದಿದ್ದು, ವೆಲ್ಡಿಂಗ್ ಮಾಡುವ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿ ದಟ್ಟ ಹೊಗೆ ಕಾಣಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ ಕಂಪೆನಿಯ ಮೂಲಗಳು ಇನ್ನೂ ಈ ಬಗ್ಗೆ ಖಚಿತ ವ್ಯಕ್ತಪಡಿಸಿಲ್ಲ.ಗುರುವಾರ ಈ ಕಂಪೆನಿಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಮಂಗಳೂರು ಕದ್ರಿ ಅಗ್ನಿಶಾಮಕ ದಳ, ಎಚ್ಪಿಸಿಎಲ್, ಎನ್ಎಂಪಿಟಿ ಸಿಬ್ಬಂದಿ ವರ್ಗ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿದ್ದಾರೆ.