ಸಭಾಪತಿ ಸ್ಥಾನದ ಗೊಂದಲ: ಉಡುಪಿ ರೆಡ್ಕ್ರಾಸ್ ಭವನದಲ್ಲಿ ವಾಗ್ವಾದ
ಉಡುಪಿ, ಆ.16: ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿ ವಿವಾದ ಉಂಟಾಗಿದ್ದು, ಈ ಬಗ್ಗೆ ಅಜ್ಜರಕಾಡು ರೆಡ್ಕ್ರಾಸ್ ಭವನದಲ್ಲಿ ಸೋಮವಾರ ಬಸ್ರೂರು ರಾಜೀವ ಶೆಟ್ಟಿ ಹಾಗೂ ತಲ್ಲೂರು ಶಿವರಾಮ ಶೆಟ್ಟಿ ಮಧ್ಯೆ ವಾಗ್ವಾದ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಸ್ರೂರು ರಾಜೀವ ಶೆಟ್ಟಿಯ ರೆಡ್ಕ್ರಾಸ್ ಪ್ರಾಥಮಿಕ ಸದಸ್ಯತ್ವವನ್ನು ರಾಜ್ಯ ಸಮಿತಿ ರದ್ದುಗೊಳಿಸಿದ್ದು, ಜಿಲ್ಲಾಧಿಕಾರಿ ನನ್ನನ್ನು ಜಿಲ್ಲಾ ಘಟಕದ ಸಭಾಪತಿ ಯನ್ನಾಗಿ ನೇಮಕ ಮಾಡಿದ್ದಾರೆಂದು ತಲ್ಲೂರು ಶಿವರಾಮ ಶೆಟ್ಟಿ ವಾದಿಸಿದರೆ, ಜಿಲ್ಲಾಧಿಕಾರಿಗಳು ನನ್ನನ್ನು ಸಭಾಪತಿ ಸ್ಥಾನದಿಂದ ವಿಮುಕ್ತಿಗೊಳಿಸಿ ತಲ್ಲೂರು ಶಿವರಾಮ ಶೆಟ್ಟಿಯನ್ನು ಕಾನೂನಿಗೆ ವಿರುದ್ಧವಾಗಿ ಸಭಾಪತಿಯನ್ನಾಗಿ ನೇಮಿಸಿದ್ದಾರೆ ಎಂದು ಬಸ್ರೂರು ರಾಜೀವ ಶೆಟ್ಟಿ ಆರೋಪಿಸಿದ್ದಾರೆ.
ಈ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಳ್ಳಲು ಬಸ್ರೂರು ರಾಜೀವ ಶೆಟ್ಟಿ ರೆಡ್ಕ್ರಾಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಪತ್ರಿಕಾಗೋಷ್ಠಿ ಪ್ರಾರಂಭವಾಗುತ್ತಿದ್ದಂತೆ ರೆಡ್ಕ್ರಾಸ್ ಭವನಕ್ಕೆ ತನ್ನ ವಕೀಲರ ಜೊತೆ ಆಗಮಿಸಿದ ತಲ್ಲೂರು ಶಿವರಾಮ ಶೆಟ್ಟಿ ಪತ್ರಿಕಾಗೋಷ್ಠಿ ನಡೆಸುವುದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇವರ ಮಧ್ಯೆ ವಾಗ್ವಾದಗಳು, ಮಾತಿನ ಚಕಮಕಿ ನಡೆಯಿತು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಠಾಣಾ ಪೊಲೀಸರು ಇವರಿ ಬ್ಬರು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಬಳಿಕ ರೆಡ್ಕ್ರಾಸ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಯಿತು. ಈ ಸಂದರ್ಭದಲ್ಲಿ ತಲ್ಲೂರು ಶಿವರಾಮ ಶೆಟ್ಟಿ ಜೊತೆ ಅವರ ವಕೀಲ ದಿವೇಶ್, ಜಯರಾಮ ಆಚಾರ್ಯ, ಅಮ್ಮುಂಜೆ ಅರವಿಂದ ನಾಯಕ್, ಕೆ.ಸನ್ಮತ್ ಹೆಗ್ಡೆ ಮತ್ತು ಬಸ್ರೂರು ರಾಜೀವ ಶೆಟ್ಟಿ ಜೊತೆ ಬಾಲಕೃಷ್ಣ ಶೆಟ್ಟಿ, ವಿ.ಜೆ.ಶೆಟ್ಟಿ ಇದ್ದರು.
‘ನನ್ನನ್ನು ಸಭಾಪತಿ ಸ್ಥಾನದಿಂದ ವಿಮುಕ್ತಿಗೊಳಿಸಿದ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು, ಹೈಕೋರ್ಟ್ ನನ್ನ ಪ್ರಾಥಮಿಕ ಸದಸ್ಯತ್ವವನ್ನು ಊರ್ಜಿತಗೊಳಿಸಿ ತೀರ್ಪು ನೀಡಿದೆ. 2021ರ ಜೂ.17ರಂದು ಹೈಕೋರ್ಟ್ ವಿಭಾಗೀಯ ಪೀಠ ನನ್ನ ಮೇಲ್ಮನವಿಯಂತೆ ಮತ್ತೆ ನನ್ನ ಪ್ರಾಥಮಿಕ ಸದಸ್ಯತ್ವ ಊರ್ಜಿತಗೊಳಿಸುವುದರೊಂದಿಗೆ ಸಂಸ್ಥೆಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿ ಸ್ಥಾನವನ್ನು 2020ರ ನ.12ರಿಂದಲೇ ಪೂರ್ವನ್ವಯಗೊಳಿಸಿ ಆದೇಶ ನೀಡಿದೆ. ಈ ಮೂಲಕ ಹೈಕೋರ್ಟ್ ಡಿಸಿಯ ಅಸಿಂಧು ಆದೇಶವನ್ನು ಸಂಪೂರ್ಣ ಅನರ್ಹಗೊಳಿಸಿದೆ’
-ಬಸ್ರೂರು ರಾಜೀವ ಶೆಟ್ಟಿ.
'‘ಅನಧಿಕೃತವಾಗಿ ಟ್ರಸ್ಟ್ ನೊಂದಾಯಿಸಿದ ಕಾರಣಕ್ಕಾಗಿ ರಾಜ್ಯ ಶಾಖೆಯು ಜು.14ರಂದು ಬಸ್ರೂರು ರಾಜೀವ ಶೆಟ್ಟಿ ಅವರ ಪ್ರಾಥಮಿಕ ಸದಸ್ಯತ್ವ ರದ್ದು ಗೊಳಿಸಿತು. ಸಭಾಪತಿ ಸ್ಥಾನದಿಂದ ಇವರನ್ನು ಉಚ್ಛಾಟಿಸಲಾಯಿತು. ಇದನ್ನು ಪ್ರಶ್ನಿಸಿ ಬಸ್ರೂರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕೃ ಸಿತು. ಬಳಿಕ ಮೇಲ್ಮನವಿಯಲ್ಲಿ ಪ್ರಾಥಮಿಕ ಸದಸ್ಯತ್ವವು ರಾಜ್ಯ ಸಮಿತಿಯ ವಿವೇಚನೆಗೆ ಬಿಟ್ಟಿದ್ದು ಅಲ್ಲಿಯವರಿಗೆ ಸಭಾಪತಿ ಸ್ಥಾನದಲ್ಲಿ ಮುಂದುವರೆಯು ವಂತೆ ಹೈಕೋರ್ಟ್ ಆದೇಶ ನೀಡಿತು. ಆದರೆ ಜು.14ರಂದು ಬಸ್ರೂರು ಅವರ ಸದಸ್ಯತ್ವ ರದ್ದಾಗಿರುವುದರಿಂದ ಅವರು ಸಭಾಪತಿಯಾಗಿ ಮುಂದುವರೆಯಲು ನ್ಯಾಯಾಲಯದ ಆದೇಶದಂತೆ ಯಾವುದೇ ಅವಕಾಶ ಇರುವುದಿಲ್ಲ'’
-ತಲ್ಲೂರು ಶಿವರಾಮ ಶೆಟ್ಟಿ