ಗ್ರಾಮೀಣ ಪ್ರದೇಶದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆರಂಭ: ನಾರಾಯಣ ಸ್ವಾಮಿ
ಉಡುಪಿ, ಆ.19: ಮುಂದೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯನ್ನು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸ ಲಾಗುವುದೆಂದು ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ರಾಜಾ್ಯಧ್ಯಕ್ಷ ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಶ್ರಯದಲ್ಲಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪ್ರತಿನಿಧಿಗಳ ಸಭೆಯನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಘಟನೆಯ ರಾಷ್ಟ್ರೀಯ ಸಲಹೆಗಾರ ವಿ.ವೈ.ಘೋರ್ಪಡೆ ಮಾತನಾಡಿ, ಸಂಘಟನೆಯ ಸಂಯೋಜಕರು ತರಬೇತಿಯನ್ನು ಪಡೆದುಕೊಂಡು ತಮ್ಮ ತಮ್ಮ ಗ್ರಾಪಂಗಳಲ್ಲಿ ಸಿಗುವ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ತಲುಪಿಸಬೇಕು. ಹಾಗೆಯೇ ಕೆಳಹಂತದಲ್ಲಿ ಪಕ್ಷವನ್ನು ಸಂಘಟಿಸುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಸಂಘಟನೆಯ ರಾಷ್ಟ್ರೀಯ ಸಲಹೆಗಾರ ಡಿ.ಆರ್.ಪಾಟೀಲ್ ಮಾತನಾಡಿ, ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮ ಮಟ್ಟದಿಂದಲೇ ಅಧಿಕಾರ ಚಲಾವಣೆ ಆಗಬೇಕು. ಈಗ ಶಾಸಕರ ಹಿಡಿತದಲ್ಲಿ ಅಧಿಕಾರವಿದ್ದು ಅದು ಗ್ರಾಪಂ ಮಟ್ಟಕ್ಕೆ ತಲುಪಲು ಯೋಜನೆ ರೂಪಿಸಿದ್ದೇವೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜ್ಯ ಆರ್.ಜಿ.ಪಿ.ಆರ್.ಎಸ್.ನ ಸಂಚಾಲಕ ವಿಜಯ ಸಿಂಗ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಅಭಯಚಂದ್ರ ಜೈನ್, ಕೆ.ಪಿ.ಸಿ.ಸಿ. ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ, ನವೀನ್ ಕೊಪ್ಪ, ಗೀತಾ ವಾಗ್ಳೆ, ಮಲ್ಯಾಡಿ ಶಿವರಾಮ್ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಹರೀಶ್ ಕಿಣಿ, ಅಣ್ಣಯ್ಯ ಸೇರಿಗಾರ್, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಮೇರಿ ಡಿಸೋಜಾ, ಶಂಕರ್ ಕುಂದರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನಕರ್ ಹೇರೂರು, ಭಾಸ್ಕರ್ ರಾವ್ ಕಿದಿಯೂರು, ದೀಪಕ್ ಕೋಟ್ಯಾನ್, ಶಶಿಧರ ಶೆಟ್ಟಿ ಎಲ್ಲೂರು, ಹರೀಶ್ ಶೆಟ್ಟಿ ಪಾಂಗಾಳ, ಇಸ್ಮಾಯಿಲ್ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು.
ಭಾಸ್ಕರ್ ಪೂಜಾರಿ ಅವರನ್ನು ಸಂಘಟನೆಯ ಕೋಟ ಬ್ಲಾಕ್ನ ಸಂಯೋಜಕರನ್ನಾಗಿ ನೇಮಕ ಮಾಡಿ ಆದೇಶ ಪ್ರತಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.