'ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸುತ್ತಿದ್ದರೆ ಮೂರೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದೆ'
ಸೌದಿಯಿಂದ ತಾಯ್ನಾಡಿಗೆ ಮರಳಿದ ಹರೀಶ್ ಬಂಗೇರರ ನೋವಿನ ನುಡಿ
ಉಡುಪಿ, ಆ.20: ‘ನನ್ನ ಬಂಧನವಾದಗಲೇ ಇಲ್ಲಿನ ಜನಪ್ರತಿನಿಧಿಗಳು ತಕ್ಷಣವೇ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದರೆ ನಾನು ಮೂರೇ ತಿಂಗಳಿನಲ್ಲಿ ಜೈಲಿನಿಂದ ಹೊರಗಡೆ ಬರುತ್ತಿದೆ. ಆದರೆ ಇಲ್ಲಿಂದ ಕೇಂದ್ರ ಸರಕಾರಕ್ಕೆ ನನ್ನ ಬಗ್ಗೆ ವರದಿ ಸಲ್ಲಿಸಲು ವಿಳಂಬ ಆಗಿರುವುದರಿಂದ ನಾನು ಒಂದು ವರ್ಷ 8 ತಿಂಗಳ ಕಾಲ ಸೌದಿ ಜೈಲಿನಲ್ಲಿ ಕಳೆಯಬೇಕಾಯಿತು’
ಇದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಆರೋಪದಲ್ಲಿ ಸೌದಿ ಅರೇಬಿಯಾದ ಜೈಲಿನಲ್ಲಿ ಬಂಧಿಯಾಗಿ ಆ.16ರಂದು ಬಿಡುಗಡೆಗೊಂಡು ಇದೀಗ ತಾಯ್ನಾಡಿಗೆ ಆಗಮಿಸಿರುವ ಕೋಟೇಶ್ವರದ ಬೀಜಾಡಿ ಗ್ರಾಮದ ಗೋಯಾಡಿಬೆಟ್ಟು ನಿವಾಸಿ ಹರೀಶ್ ಬಂಗೇರ (35) ಅವರ ನೋವಿನ ನುಡಿ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸಂಘಟನೆಗಳು ಹೋರಾಟ ಮಾಡಿದ ಬಳಿಕವೇ ಇಲ್ಲಿನ ಜನಪ್ರತಿನಿಧಿಗಳು ಚುರುಕಾದರು. ಅದೇ ರೀತಿ ಇಲ್ಲಿಂದ ವರದಿ ಸೌದಿಗೆ ಸಲ್ಲಿಸಲು ಕೊರೋನ ಕೂಡ ಅಡ್ಡಿಯಾಯಿತು. ಹೀಗಾಗಿ ನಾನು ಜೈಲಿನಲ್ಲಿ ನರಕಯಾತೆ ಅನುಭವಿಸಬೇಕಾಯಿತು’ ಎಂದರು.
ತಪ್ಪಿಗೆ ಕ್ಷಮೆ ಕೇಳಿದ್ದೆ
‘ನಾನು, 2019ರ ಡಿ.19ರಂದು ಬೇರೆಯವರು ಫೇಸ್ಬುಕ್ನಲ್ಲಿ ಹಾಕಿದ್ದ ಪೌರತ್ವ ಕಾಯಿದೆ ಸಂಬಂಧಿಸಿದ ವಿಡಿಯೋವನ್ನು ಶೇರ್ ಮಾಡಿದ್ದೆ. ಈ ವಿಚಾರದಲ್ಲಿ ಕೆಲವರು ಫೋನ್ ಮಾಡಿ ಬೆದರಿಕೆಯೊಡ್ಡಿದ್ದರು. ಆ ಹಿನ್ನೆಲೆಯಲ್ಲಿ ನಾನು ಆ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದೆ. ಅಲ್ಲದೆ ಕ್ಷಮೆ ಕೇಳಿದ ವಿಡಿಯೋ ಕೂಡ ನನ್ನ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದೆ’
ಅದೇ ದಿನ ರಾತ್ರಿ ನನ್ನ ಫೇಸ್ಬುಕ್ ಖಾತೆಯನ್ನು ಡಿಯಾಕ್ಟಿವ್ ಮಾಡಿದ್ದೆ. ಡಿ.20ರಂದು ನನ್ನ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆಯನ್ನು ಸೃಷ್ಠಿಸಿ, ಅದರಲ್ಲಿ ಸೌದಿ ದೊರೆ ಹಾಗೂ ಮಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಇದೇ ಆರೋಪದಲ್ಲಿ ನನ್ನನ್ನು ಬಂಧಿಸಲಾಯಿತು. ನಾನು ಮಾಡದ ತಪ್ಪಿಗೆ ಜೈಲಿಗೆ ಹೋಗಬೇಕಾಯಿತು ಎಂದು ಹರೀಶ್ ಬಂಗೇರ ತಿಳಿಸಿದರು.
ಶಿಕ್ಷೆಯಾಗುವವರೆಗೆ ಹೋರಾಟ
ನನ್ನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಠಿಸಿ ಅವಹೇಳನಕಾರಿ ಪೋಸ್ಟ್ ಹಾಕಿ ನಾನು ಜೈಲಿಗೆ ಹೋಗುವಂತೆ ಮಾಡಿದ ಮೂಡುಬಿದಿರೆಯ ಸಹೋದರರಿಗೆ ಕಠಿಣ ಶಿಕ್ಷೆಯಾಗಬೇಕು. ಅಲ್ಲಿಯವರೆಗೆ ನಾನು ನನ್ನ ಹೋರಾಟ ನಿಲ್ಲಿಸುವುದಿಲ್ಲ. ಮುಂದೆ ಯಾರಿಗೂ ಯಾರು ಕೂಡ ಹೀಗೆ ಮಾಡಬಾರದು ಎಂದು ಹರೀಶ್ ಬಂಗೇರ ಹೇಳಿದರು.
ಈ ಸಹೋದರರ ಬಗ್ಗೆ ನನಗೆ ವೈಯಕ್ತಿಕವಾಗಿ ಯಾವುದೇ ಪರಿಚಯ ಇಲ್ಲ. ಅವರು ಯಾವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇವರಿಂದಾಗಿ ನಾನು ಏಳು ತಿಂಗಳ ಕಾಲ ಜೈಲಿನ ಒಂದೇ ಕೋಣೆಯಲ್ಲಿ ಒಬ್ಬನೇ ಕಳೆದೆ. ಇದರಿಂದ ಪ್ರತಿ ಕ್ಷಣ ಕೂಡ ಮಾನಸಿಕ ಹಿಂಸೆಯನ್ನು ಅನುಭವಿಸಿದೆ. ಕೆಲಸ ಇಲ್ಲದೆ ನನ್ನ ಪತ್ನಿ ಮಕ್ಕಳು ನೋವು ಅನುಭವಿಸಿದರು ಎಂದು ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಹರೀಶ್ ಬಂಗೇರರ ಪತ್ನಿ ಸುಮನಾ, ಸ್ನೇಹಿತ ಲೋಕೇಶ್ ಅಂಕದಕಟ್ಟೆ ಉಪಸ್ಥಿತರಿದ್ದರು.
ಸೌದಿಯಲ್ಲಿ ಸ್ನೇಹಿತರೇ ನನ್ನನ್ನು ರಕ್ಷಿಸಿದರು
ಸೌದಿಯಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದ ಕಂಪೆನಿಯ ಸ್ನೇಹಿತರು ನನಗೆ ತುಂಬಾ ಸಹಾಯ ಮಾಡಿದರು. ಈ ಪ್ರಕರಣ ನಡೆದಾಗ ಸುಮಾರು 50-60 ಮಂದಿ ಕಂಪೆನಿಗೆ ನುಗ್ಗಿ ನನ್ನ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ನನ್ನವರು ಅಂತ ಅಲ್ಲಿ ಯಾರು ಇರಲಿಲ್ಲ. ಆಗ ಗೆಳೆಯರಾದ ಉಡುಪಿ ಸಂತೆಕಟ್ಟೆ ಜಾನ್ಸನ್ ಲೂವಿಸ್, ಮುಂಬೈಯ ಜಲಾಲ್ ಮತ್ತು ಮುದರೀಸ್ ನನ್ನನ್ನು ರಕ್ಷಣೆ ಮಾಡಿದರು. ಅವರಿಲ್ಲದ್ದರೆ ಇಂದು ನಾನು ಬದುಕಿ ಬರುತ್ತಿರಲಿಲ್ಲ. ಅವರ ಜೊತೆ ನಾನು ಐದು ವರ್ಷಗಳ ಕಾಲ ಕೆಲಸ ಮಾಡಿರುವುದರಿಂದ ಅವರೆಲ್ಲರಿಗೂ ನಾನು ಹೇಗೆ ಅಂತ ಗೊತ್ತು ಎಂದು ಹರೀಶ್ ಬಂಗೇರ ತಿಳಿಸಿದರು.
‘ಎಲ್ಲ ಶ್ರಮದಿಂದ ಬಿಡುಗಡೆಯಾಗಿ ಬಂದೆ’
‘ನನ್ನ ಬಿಡುಗಡೆಗೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ರವೀಂದ್ರನಾಥ್ ಶಾನುಭಾಗ್ ಸಾಕಷ್ಟು ಶ್ರಮಿಸಿದ್ದಾರೆ. ಅವರ ಕಾನೂನು ಹೋರಾಟದಿಂದಲೇ ನಾನು ನಿರಾಪರಾಧಿ ಎಂದು ಸಾಬೀತಾಗಿದೆ. ಅದೇ ರೀತಿ ಸಂಘಸಂಸ್ಥೆಗಳು ಕೂಡ ನನಗಾಗಿ ಹೋರಾಟ ಮಾಡಿದ್ದಾರೆ. ಪೊಲೀಸ್ ಇಲಾಖೆಯವರ ಪರಿಶ್ರಮ ಕೂಡ ಸಾಕಷ್ಟಿದೆ. ಇಂಡೋನೇಶಿಯಾದ ರಾಯಭಾರಿ ಕಚೇರಿಯ ಸುಕೇಶ್ ಶೆಟ್ಟಿ ಕೂಡ ಸಾಕಷ್ಟು ಸಹಕಾರ ನೀಡಿದರು. ಇವರೆಲ್ಲರಿಂದಲೇ ನಾನು ಇಂದು ಹೊರಗಡೆ ಬಂದಿದ್ದೇನೆ. ಇವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸೌದಿ ಜೈಲಿನಿಂದ ಬಿಡುಗಡೆಯಾಗಲು ಯಾವುದೇ ಪ್ರಭಾವಗಳು ನಡೆಯುವುದಿಲ್ಲ. ಅಲ್ಲಿನ ಜೈಲಿನಿಂದ ಹೊರಗಡೆ ಬರುವುದು ಅಷ್ಟು ಸುಲಭವೂ ಅಲ್ಲ’ ಎಂದು ಹರೀಶ್ ಬಂಗೇರ ಹೇಳಿದರು.